You are currently viewing ವಚನಗಳು ಪರಿಪಾಲನೆ & ಮಾನವತವಾದದ ಪರಿಕರಗಳು

ವಚನಗಳು ಪರಿಪಾಲನೆ & ಮಾನವತವಾದದ ಪರಿಕರಗಳು

ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ವಿಶಿಷ್ಟವಾದ ಕಾಲಘಟ್ಟ. ಜಡ್ಡು ಹಿಡಿದಿದ್ದ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವ ಮೂಲಕ ಒಂದು ಹೊಸ ಸಮಾಜದ ಸೃಷ್ಟಿಯ ಕನಸನ್ನು ಕಂಡಂತಹ ಶರಣರು, ಬಸವಣ್ಣನವರ ನೇತೃತ್ವದಲ್ಲಿ ನಡೆಸಿದಂತಹ ಕ್ರಾಂತಿ ಅಪೂರ್ವವಾದುದು.ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡು ಸಾಮಾನ್ಯರ ಬದುಕಿನ ಎಲ್ಲಾ ಸ್ತರಗಳು ಆ ಚಳವಳಿಯ ಒಂದು ಭಾಗವಾದದ್ದು, ಶರಣರ ಪೂರ್ಣದೃಷ್ಟಿಯ ಸಂಕೇತ. ಜಾತ್ಯತೀತ ಸಮಾಜ ಕಲ್ಪನೆ ಬಸವಣ್ಣನವರ ಕಣ್ಣಿಗೆ ಮೊದಲು ಬಿದ್ದದ್ದು ಅಂದಿನ ಸಮಾಜದಲ್ಲಿನ ಜಾತೀಯ ವಿಷಮತೆ.

ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ, ದಲಿತರ ಮೇಲೆ ನಡೆಯುತ್ತಿದ್ದ ಕ್ರೌರ್ಯ, ಬಸವಣ್ಣನವರ ಮನಸ್ಸನ್ನು ತುಂಬಾ ಘಾಸಿಗೊಳಿಸಿತು. ಇದರಿಂದಾಗಿ ಬಸವಾದಿ ಶರಣರು ಇಡೀ ಜಾತಿ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಕೊಲುವವನೆ ಮಾದಿಗ ಹೊಲಸ ತಿಂಬುವವನೆ ಹೊಲೆಯ ಕುಲಯಾವುದೋ ಆವಂದಿರ ಕುಲ ಯಾವುದೋ!? ಎಂದು ಪ್ರಶ್ನಿಸುವ ಮೂಲಕ ‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವವನು ಕುಲಜನು’ ಎಂಬ ವ್ಯಾಖ್ಯಾನ ನೀಡಿದ ಹಿರಿಮೆ ಬಸವಣ್ಣನವರಿಗೆ ಸಲ್ಲುತ್ತದೆ. ಜಾತ್ಯತೀತ ಸಮಾಜದ ಪರಿಕಲ್ಪನೆ ಶರಣರ ಬಹುದೊಡ್ಡ ಕಾಣಿಕೆ.
ಬಸವಣ್ಣನವರು ಪ್ರತಿಪಾದಿಸಿದ ಕಾಯಕ-ದಾಸೋಹ ಸೂತ್ರ ಒಂದು ವಿನೂತನವಾದ ಆರ್ಥಿಕ ಸಿದ್ಧಾಂತಕ್ಕೆ ನಾಂದಿಯಾಯಿತು.

ಕಾಯಕ ಸಂಸ್ಕೃತಿಯ ಪ್ರತಿಪಾದಕರಾದ ಶರಣರು ‘ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ’ ಎಂಬ ಸಂದೇಶ ನೀಡಿ ಬೆವರಿನ ಹಾಗೂ ಶ್ರಮ ಸಂಸ್ಕೃತಿಯ ಪ್ರತಿಪಾದಕರಾದರು.ಅಲ್ಲದೆ, ನಾವು ಮಾಡುವ ಕಾಯಕ ಸತ್ಯಶುದ್ಧವಾಗಿರಬೇಕು ಎಂದು ಹೇಳುವ ಮೂಲಕ ಕಾಯಕಕ್ಕೆ ನೈತಿಕ ಮೌಲ್ಯ ನೀಡಿದವರು ಬಸವಾದಿ ಶರಣರು. ಶರಣ ಸಂಸ್ಕೃತಿಯಲ್ಲಿ ಸೋಮಾರಿಗಳಿಗೆ ಸ್ಥಾನವೇ ಇಲ್ಲ. ದುಡಿಮೆಯಿಲ್ಲದೆ ಸಂಪತ್ತು ಗಳಿಸಬೇಕೆಂಬ ಇಂದಿನ ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶ ಎಂದೆಂದೂ ಅನ್ವಯವಾಗುವ ಒಂದು ದಿವ್ಯ ಸಂದೇಶವಾಗಿದೆ. ವ್ಯಕ್ತಿ ತಾನು ಕಾಯಕದಿಂದ ಗಳಿಸುವ ಸಂಪತ್ತನ್ನು ತಾನೊಬ್ಬನೇ ಅನುಭವಿಸಬೇಕೆಂಬ ತತ್ವವನ್ನು ನಿರಾಕರಿಸಿದರು. ತನ್ನ ಗಳಿಕೆಯಲ್ಲಿ ಸಮಾಜದ ಪಾತ್ರವೂ ಇರುವುದರಿಂದ ಅದು ಸಮಾಜಕ್ಕೆ ವಿನಿಯೋಗ ಆಗಬೇಕೆಂಬ ಒಂದು ವಿಶಿಷ್ಟ ದಾಸೋಹ ಸೂತ್ರ ಪ್ರತಿಪಾದನೆ ಮಾಡಿದವರು ಬಸವಾದಿ ಶರಣರು.



ಹಂಚಿಕೊಂಡು ತಿನ್ನುವುದು ಶರಣ ಧರ್ಮ. ಹಂಚಿಕೊಂಡು ತಿನ್ನುವ ಗುಣ ಪ್ರಾಣಿ ಪಕ್ಷಿಗಳಲ್ಲಿ ಕಾಣುವ ಬಸವಣ್ಣನವರಿಗೆ ಮತ್ತೊಬ್ಬರಿಂದ ಕಸಿದುಕೊಂಡು ತಿನ್ನುವ ಮನುಷ್ಯನನ್ನು ನೋಡಿದಾಗ ನೋವಾಗುತ್ತದೆ. ಅವರ ಈ ವಚನ ಇದಕ್ಕೆ ಸಾಕ್ಷಿಯಾಗಿದೆ. ಕಾಗೆ ಒಂದಗುಳ ಕಂಡೊಡೆ ಕರೆಯದೆ ತನ್ನ ಬಳಗವನು, ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ, ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ. ಕೂಡಲಸಂಗಮದೇವಾ.
ಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದ ಸ್ತ್ರೀಸಮುದಾಯದ ಧ್ವನಿಯಾದವರು ಬಸವಾದಿ ಶರಣರು. ಹೆಣ್ಣು ಮಾಯೆಯಲ್ಲ ಎಂದು ಪ್ರತಿಪಾದಿಸುತ್ತಾ ಲಿಂಗಬೇಧದ ವಿರುದ್ಧ ಸಿಡಿದೇಳುವ ಮೂಲಕ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆ ಮಾಡಿದವರು ಬಸವಣ್ಣನವರು. ಹೆಣ್ಣು ಗಂಡು ಎನ್ನುವ ಕಲ್ಪನೆ ಕೇವಲ ದೇಹಕ್ಕೆ ಮಾತ್ರವೇ ವಿನಃ ಆತ್ಮಕ್ಕೆ ಅಲ್ಲ ಎಂಬ ವಿಶಿಷ್ಟ ಕಲ್ಪನೆ ನೀಡಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ. ಬಸವಣ್ಣನವರ ದಿವ್ಯ ನೇತೃತ್ವದಲ್ಲಿ ನಡೆದ ಸಮಗ್ರ ಕ್ರಾಂತಿಯ ಸ್ವರೂಪವನ್ನು ಅರ್ಥೈಸಬೇಕಾದರೆ ಅವರು ಹಾಗೂ ಅವರ ಸಮಕಾಲೀನ ಶರಣರು ರಚಿಸಿದ ವಚನ ಸಾಹಿತ್ಯಕ್ಕೆ ನಾವು ಮೊರೆ ಹೋಗಬೇಕಾಗುತ್ತದೆ. ಏಕೆಂದರೆ ಶರಣರು ನಡೆಸಿದ ಕ್ರಾಂತಿಗೆ ವಚನಸಾಹಿತ್ಯವೇ ನೀತಿಸಂಹಿತೆ. ಅದೇ ಅವರ ಹೋರಾಟದ ಸಂವಿಧಾನ. ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ತಂದು ಕೊಟ್ಟಂತಹ ಅನುಭಾವ ಸಾಹಿತ್ಯ. ವಚನ ಸಾಹಿತ್ಯದ ರಚನೆ, ಶರಣರ ಮೂಲ ಉದ್ದೇಶವಾಗಿರಲಿಲ್ಲ. ಅದು ಅವರ ನಿರಂತರ ಜೀವನಾನುಭವದಿಂದ ಹುಟ್ಟಿಕೊಂಡ ಅಂತರಂಗದ ಸಹಜ ಅಭಿವ್ಯಕ್ತಿ. ಶರಣರ ಬದುಕಿನ ಅನುಸಂಧಾನದ ಹಾದಿಯಲ್ಲಿ ಅವರ ಅನುಭಾವದ ಮೂಸೆಯಲ್ಲಿ ಅರಳಿದ ಅನನ್ಯ ಜ್ಞಾನರತ್ನವೇ ವಚನಗಳು.

ವಚನ ಸಾಹಿತ್ಯದ ಮೂಲ ಆಶಯ ವ್ಯಕ್ತಿಯ ಕಲ್ಯಾಣದೊಂದಿಗೆ ಲೋಕಕಲ್ಯಾಣದ ಸಾಧನೆ. ವಚನ ಸಾಹಿತ್ಯದ ಉಗಮಸ್ಥಾನವೇ ಅನುಭವ ಮಂಟಪ. ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪ ಶರಣರ ತತ್ವಚಿಂತನೆಗೆ ಒಂದು ವೇದಿಕೆಯಾಯಿತು. ಲಿಂಗಬೇಧವಿಲ್ಲದೆ, ವರ್ಣಬೇಧವಿಲ್ಲದೆ ಎಲ್ಲ ಶರಣರು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಇತರರ ವಿಚಾರಗಳನ್ನು ಹಂಚಿಕೊಳ್ಳುವ ಒಂದು ವಿಚಾರ ದಾಸೋಹದ ಕೇಂದ್ರವಾಯಿತು ಅನುಭವಮಂಟಪ. ದಯೆಯೆ ಧರ್ಮದ ಮೂಲವಯ್ಯ ದಯೆಯಿಲ್ಲದ ಧರ್ಮ ಯಾವುದಯ್ಯ ದಯೆ ಬೇಕು ಸಕಲ ಪ್ರಾಣಿಗಳೆಲ್ಲರಲಿ ದಯೆಯೆ ಧರ್ಮದ ಮೂಲವಯ್ಯ ಕೂಡಲ ಸಂಗಮದೇವನಂತಲ್ಲದೊಲ್ಲನಯ್ಯಾ. ಎಂಬ ಬಸವಣ್ಣನವರ ವಾಣಿಯಂತೆ ಶರಣ ಧರ್ಮದ ಮೂಲ ಆಧಾರವೇ ದಯೆ. ಶರಣ ಧರ್ಮದ ಮೂಲ ತಳಹದಿಯೇ ದಯೆ. ಪರಸ್ಪರ ಪ್ರೀತಿ, ಪ್ರೇಮ, ದಯೆಯಂತಹ ಮಾನವೀಯ ಗುಣಗಳಿಂದಾಗಿ ಶರಣರು ಪ್ರತಿಪಾದಿಸಿದ ಧರ್ಮ ಮಾನವ ಧರ್ಮವಾಯಿತು. ಶರಣರು ಕೇವಲ ಮಾನವರಲ್ಲಿ ಮಾತ್ರ ದಯೆ ತೋರಿದವರಲ್ಲ. ಇಡೀ ಜೀವರಾಶಿಗೆ ದಯೆಯ ಮಳೆಯನ್ನು ಸುರಿಸಿದವರು.

ಶರಣರು ಧಾರ್ಮಿಕ ಚಿಂತನೆ ಉಳ್ಳವರಾಗಿದ್ದರೂ, ಎಂದೂ ಸಹ ಮೂಢನಂಬಿಕೆಗಳನ್ನು ಧರ್ಮದ ಹೆಸರಿನಲ್ಲಿ ಪ್ರೋತ್ಸಾಹಿಸಿದವರಲ್ಲ. ಬದಲಿಗೆ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದವರು. ಅವರು ಯಜ್ಞ ಯಾಗಾದಿಗಳನ್ನು ಖಂಡಿಸಿದರು. ವರ, ತಿಥಿ, ನಕ್ಷತ್ರ, ಯೋಗ, ಕರಣ ಹೀಗೆ ಇವುಗಳ ಹೆಸರಿನಲ್ಲಿ ಶೋಷಿಸುವವರ ವಿರುದ್ಧ ಸಿಡಿದು ನಿಂತರು. ವೈಚಾರಿಕ ಚಿಂತನೆಯನ್ನು ಬೋಧಿಸಿದರು.



ಶರಣರು ಬದುಕಿನಿಂದ ಎಂದೂ ವಿಮುಖರಾದವರಲ್ಲ.ಪಲಾಯನವಾದಿಗಳಾದವವರಲ್ಲ. ಇಹಪರಗಳ ಸಮನ್ವಯದ ಸೂತ್ರವನ್ನು ಬದುಕಿನಲ್ಲಿ ಆವಿಷ್ಕಾರಗೊಳಿಸಿಕೊಂಡವರು ಶರಣರು, ಲೌಕಿಕ ಬದುಕಿನಲ್ಲಿ ಇಹದಲ್ಲಿ ಯಾರು ಪ್ರಾಮಾಣಿಕವಾಗಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿ ಸಹಮಾನವರಿಂದ ಮೆಚ್ಚುಗೆ ಹಾಗೂ ಪ್ರೀತಿಯನ್ನು ಗಳಿಸಿಕೊಳ್ಳುತ್ತಾರೋ, ಅವರು ಇಲ್ಲಿಯೂ ಸಲ್ಲುತ್ತಾರೆ, ಅಲ್ಲಿಯೂ ಸಲ್ಲುತ್ತಾರೆ. ಶರಣರ ದೃಷ್ಟಿಯಲ್ಲಿ ಸ್ವರ್ಗ ನರಕಗಳ ಕಲ್ಪನೆ ಕೇವಲ ಕಾಲ್ಪನಿಕ.ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರುಕೂಡಲಸಂಗಮದೇವಾ.ಅಲ್ಲಿ ಸಲ್ಲಬೇಕಾದರೆ, ಇಲ್ಲಿಯೂ ಸಲ್ಲಬೇಕು ಎಂಬ ಸಂದೇಶದ ಮೂಲಕ ಇಲ್ಲಿನ ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂಬ ಶರಣರ ವಿಚಾರಧಾರೆ, ಅನನ್ಯವಾದುದು. ಯಾವುದೋ ಕಾಲ್ಪನಿಕ ಸ್ವರ್ಗದ ಬಗ್ಗೆ ಚಿಂತಿಸುತ್ತಾ ಇಹದ ಬದುಕನ್ನು ಅನುಭವಿಸದೆ ಇರುವವರಿಗೆ ಶರಣರ ಈ ಸಂದೇಶ ಇಹದ ಬದುಕಿಗೆ ಇರುವ ಮಹತ್ವವನ್ನು ಎತ್ತಿ ತೋರಿಸುತ್ತದೆ.ಕಲ್ಯಾಣ ಸಮಾಜ ನಿರ್ಮಾಣ: ಶರಣ ಸಂಸ್ಕೃತಿಯ ಮೂಲ ಆಶಯ ಸಮಾನತೆಯ ಸುಂದರ ಕಲ್ಯಾಣ ಸಮಾಜದ ನಿರ್ಮಾಣ. ಅಲ್ಲಿ ವರ್ಗಬೇಧವಿಲ್ಲ, ವರ್ಣಬೇಧವಿಲ್ಲ, ಜಾತಿಬೇಧವಿಲ್ಲ, ದಯೆಯೇ ಧರ್ಮದ ಮೂಲವಾಗಿರುವ ಧರ್ಮಗಳಲ್ಲಿ ಬೇಧಗಳೇ ಇಲ್ಲ. ಮಾನವ ಸಮುದಾಯವನ್ನು ಎಲ್ಲಾ ಅನಿಷ್ಟಗಳಿಂದ ಮುಕ್ತಗೊಳಿಸಿ ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವುದೇ ಶರಣರ ಗುರಿಯಾಗಿತ್ತು, ಹಂಬಲವಾಗಿತ್ತು.ಕಳಬೇಡ, ಕೊಲಬೇಡಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರ ಕಂಡರೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಸಂಗಮದೇವನ ಒಲಿಸುವ ಪರಿ. ಬಸವಣ್ಣನವರ ಈ ವಚನ ವಿಶ್ವ ಸಮುದಾಯಕ್ಕೆ ನೀಡಿದ ಬಹುದೊಡ್ಡ ನೀತಿಸಂಹಿತೆ.

ಶರಣರು ತಮ್ಮ ವಚನಗಳ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಅಗತ್ಯವಾದ ನೀತಿಸೂತ್ರಗಳ ಸಂದೇಶ ನೀಡಿದ್ದಾರೆ. ಶರಣರ ವಚನಗಳು ಮಾನವ ಸಮುದಾಯಕ್ಕೆ ನೀಡಿದ ಜೀವನ ಸಂವಿಧಾನವಿದ್ದಂತೆ. ಭಾರತದ ಸಂವಿಧಾನವನ್ನು ಅಧ್ಯಯನ ಮಾಡಿದಾಗ ಅದರಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ, ಆರ್ಥಿಕ, ನೈತಿಕ ಸೂತ್ರಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. 21ನೆಯ ಶತಮಾನದ ಸಮಾಜದ ಆರ್ಥಿಕ ಅಗತ್ಯಗಳನ್ನು 9 ಶತಮಾನಗಳ ಹಿಂದೆಯೇ ಕಲ್ಪಿಸಿಕೊಂಡಿದ್ದ ಬಸವಣ್ಣನವರು ಮಹಾನ್ ದಾರ್ಶನಿಕರು.

ಇಂದಿಗೂ ಬಸವಣ್ಣನವರು ಪ್ರತಿಪಾದಿಸಿದ ಶರಣ ಸಂಸ್ಕೃತಿ ಇಡೀ ವಿಶ್ವಕ್ಕೆ ನೀಡಿದ ಆದರ್ಶ ಮಾನವ ಸಂಸ್ಕೃತಿಯಾಗಿದೆ. ಅವರ ವಚನಗಳು ಸರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿದೆ.ಬಸವಣ್ಣನವರು ಕಟ್ಟಬಯಸಿದ ಸಮಾಜ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸಮಾನತೆಯನ್ನು ಸಾರುವಂತಹ ಆದರ್ಶ ಸಮಾಜ, ವರ್ಣರಹಿತ, ವರ್ಗರಹಿತ, ಜಾತಿರಹಿತ ಸುಂದರ ಸಮಾಜದ ಕಲ್ಪನೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದದ್ದು ಅವರ ದೂರದೃಷ್ಟಿಯ ಪ್ರತಿಬಿಂಬ. ಮಾನವೀಯತೆಯ ಸಂಕೇತ. ಸಾಮಾಜಿಕ, ಧಾರ್ಮಿಕ, ಆರ್ಥಿಕ ಚಿಂತನೆಗೆ ಸಾಧನವಾದದ್ದು ಅವರು ರಚಿಸಿದ ಸಾಹಿತ್ಯ. ಶರಣ ಸಾಹಿತ್ಯ ಅನುಭಾವ ಸಾಹಿತ್ಯವಾಗಿ ಭಾಷೆಯನ್ನು ಬೆಳೆಸಿತಲ್ಲದೆ ಮಾನವೀಯ ಮೌಲ್ಯಗಳನ್ನು ಬೆಳೆಸಿತು.ವಚನ ಸಾಹಿತ್ಯ ವಿಶ್ವದ ಸಾಹಿತ್ಯದ ಸಾಲಿನಲ್ಲಿ ಸರ್ವಕಾಲಿಕವಾಗಿ ಅತ್ಯಂತ ಗಟ್ಟಿಯಾಗಿ ನಿಲ್ಲುವಂತಹ ಪ್ರಜಾಸಾಹಿತ್ಯ, ಪ್ರಗತಿಶೀಲ ಸಾಹಿತ್ಯ. ಎಲ್ಲಕ್ಕಿಂತ ಮಿಗಿಲಾಗಿ ಮಾನವ ಸಮುದಾಯಕ್ಕೆ ದಿಕ್ಕುಗೆಟ್ಟ ಜಗತ್ತಿಗೆ ಜೀವನದರ್ಶನ ಮಾಡಿಸಿದ ಕ್ರಾಂತಿಕಾರಕ ಸಾಹಿತ್ಯ
ಬಸವಣ್ಣನವರು ಕಂಡ ವರ್ಣರಹಿತ, ಜಾತಿರಹಿತ, ಧಾರ್ಮಿಕ
ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವಾಗಬೇಕಾಗಿದೆ. ಅತ್ತ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ನಡೆಯಬೇಕಾಗಿದೆ.

ಮೈಬೂಬಸಾಹೇಬ. ವೈ.ಜೆ
ವಿಜಯಪೂರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ