ಉಳಿದವರು ಕಂಡಂತೆ…

ಲೇಖಕರು : ಬೂದೇಶ್ವರ. ಎಸ್ಎಸ್

ನಂಬಿಸುವ ಸಮಾಜದಿ

ನಂಬಿ ಒಂದಾದೇವು

ವಿಶ್ವಾಸದ ಗಾಳಿಪಟದಿ

ಸೂತ್ರವನೇ ಕೈಗಿಟ್ಟೆವು.

 

ನಯವಾದ ಮಾತಲಿ

ಮರಳು ಮಾಡುತ

ಹಿತೋಪದೇಶ ಕೊಡುವರು

ಉಳಿದವರು ಕಂಡಂತೆ.

 

ಹಿರಿಯರಂತೆ ನಟಿಸಿ

ಹಿರಿತನವ ಹೀರಿದವರು

ಜೊತೆಯಲಿ ನಡೆಯುತ

ದಾರಿ ತಪ್ಪಿಸಿದವರು.

 

ನಗಿಸಿ ಅಳಿಸುತಲೇ

ಯಾರಿಗೂ ಹೇಳದಿರೆಂದು

ಕೈಹಿಡಿದು ತಳ್ಳುತಲಿ

ಹೃದಯಕೆ ಚಿವುಟಿದರು.

 

ಬಣ್ಣದ ಬದುಕಲಿ

ನವರಂಗಿ ನಾಟಕವಾಡಿ

ತಾಳ ಹಾಕುತಲೇ

ನಂಬಿಸಿ ಕುಣಿಸಿದರು.

 

ದರ್ಪಣದಿ ಕಂಡಂತೆ

ಒಳಮನಸು ಕಾಣುವುದೇ

ಮೆತ್ತಗೆ ಮುಟ್ಟುತಲಿ

ಕಂಬಳಿ ಹುಳುವಾದರು.

 

ಕಾಣಿಸದು ಕಪಟತನ

ತೋರಿಸದೆ ಸಣ್ಣತನ

ಹಗಲು ನೆರಳಲಿ ಕೈ ಹಿಡಿದು

ರಾತ್ರಿ ನೆರಳೆಂದು ತುಳಿದರು.

 

ನೀಚ ಕಪಟ ಸ್ವಾರ್ಥದಿ

ಸಮಾಜವೇ ತುಂಬಿಹುದು

ಮುಗುಳ್ನಗೆಯ ಮೋಸದಿ

ಬಲೆಯ ಬೀಸುತಿಹರು.

 

ಜಾತಿ ಬೇಧ ಕಾಣದಂತೆ

ಮುಟ್ಟಿ ಮೌನಿಯಾದರು

ಜಾತಿ ಬೀಜಕೆ ನೀರುಣಿಸಿ

ಗೋಸುಂಬೆಗೆ ಸಾಟಿಯಾದರು.

 

ಯಾರು ಮಿತ್ರರು ನಮ್ಮೊಳಗೇ ?

ಯಾರು ಶತ್ರು ಮಿತ್ರರು ನಿಮ್ಮೊಳಗೇ ?

ಯಾರನ್ನು ನಂಬಬೇಕು ಈ ಜಗದಿ ?

ಇಂತವರ ಸಂಘ ಬೇಕೇ ಈ ಜಗದಿ?

 

ಬೂದೇಶ್ವರ. ಎಸ್ಎಸ್

ಪ್ರ. ಪ್ರಾಚಾರ್ಯರು

ಶ್ರೀ ಸಂಗಮೇಶ್ವರ ಪಪೂ ಕಾಲೇಜು

ಕೂಡಲಸಂಗಮ.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.