ಮಲೆನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ ಯುಗಾದಿ ಎಂದರೆ ಎಲ್ಲಿಲ್ಲದ ಸಂಭ್ರಮ. ಮಕ್ಕಳು,ವಯಸ್ಕರು,ಮುದುಕರೆನ್ನದೆ ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಹಬ್ಬ.ಆದರೆ ಈಗ ನಮ್ಮ ಬಾಲ್ಯದ ನೆನಪುಗಳು ಕಣ್ಮರೆಯಾಗುತ್ತಾ ಬಂದಿವೆ.ಕಾಲ ಬದಲಾದಂತೆ ಯುಗಾದಿ ಹಬ್ಬದ ಸಂಭ್ರಮವು ಕೊಂಚ ಕಡಿಮೆಯಾಗಿದೆ ಎಂಬುವುದೇ ಬೇಸರದ ಸಂಗತಿ.ಆದರೆ ಹಿಂದೆ ಯುಗಾದಿ ಹಬ್ಬ ಹಿಂಗಿರಲಿಲ್ಲ. ನನಗಿನ್ನೂ ನೆನಪಿದೆ ಹಬ್ಬದ ದಿನ ಬೆಳಗ್ಗೆಯಾದರೆ ಸಾಕು ಊರಿನಲ್ಲಿರುವ ಎಲ್ಲಾ ಚಿಕ್ಕ ಪುಟ್ಟ ಮಕ್ಕಳಿಗೆ ಎಣ್ಣೆ ಹಚ್ಚಿ ಬಿಟ್ಟುಬಿಡುತ್ತಿದ್ದರು.ಒಂದಿಷ್ಟು ಮಕ್ಕಳು ಅರೆಬರೆ ಹಳೆಯ ಹರಿದ ಚಡ್ಡಿಗಳನ್ನು ಹಾಕಿಕೊಂಡು ಊರ ತುಂಬಾ ಓಡಾಡಿದರೆ,ಇನ್ನು ಕೆಲವು ಪುಟ್ಟ ಮಕ್ಕಳು ಎಣ್ಣೆ ತುಂಬಿಕೊಂಡ ದೇಹದಿಂದ ಬೆತ್ತಲಾಗಿ ಸಂಭ್ರಮಿಸುತ್ತಿದ್ದರು.ಬರಿ ಮಕ್ಕಳು ಮಾತ್ರವಲ್ಲ ವಯಸ್ಕರೂ,ವೃದ್ಧರು, ಹೆಣ್ಣು ಮಕ್ಕಳು ಸಹ ಮೈಗೆಲ್ಲ ಎಣ್ಣೆ ಲೇಪಿಸಿಕೊಂಡು ಯುಗಾದಿ ಹಬ್ಬವನ್ನು ಸಂಭ್ರಮಿಸುವುದು ವಾಡಿಕೆ.ಇನ್ನೊಂದು ನಮ್ಮ ಬಾಲ್ಯದ ಕುತೂಹಲಕಾರಿ ಸಂಗತಿ ಎಂದರೆ ಊರ ಮಧ್ಯದಲ್ಲೊಂದು ದೊಡ್ಡ ಬಾವಿ ಇರುತ್ತಿತ್ತು.ಆ ಬಾವಿಯ ಅಕ್ಕ ಪಕ್ಕ ಕಪ್ಪು ಶಿವಲಿಂಗದಂತಿರುವ ಒಂದು ಸೇರುಗಲ್ಲು ಇರುತ್ತಿತ್ತು.ಎಣ್ಣೆ ಹಚ್ಚಿಕೊಂಡು ಬಂದ ಪುಟ್ಟ ಪುಟ್ಟ ಮಕ್ಕಳು ಓಡಿ ಬಂದು ಆ ಸೇರುಗಲ್ಲ ಬಳಿ ನೂಕು ನುಗ್ಗಲಿನಲ್ಲಿ ಕುಳಿತು ಬಿಡುತ್ತಿದ್ದರು.ಅಲ್ಲೇ ಬಾವಿಯ ಹತ್ತಿರವಿದ್ದ ಊರಿನ ಅಣ್ಣ ತಮ್ಮಂದಿರು ಬಾವಿಯ ನೀರನ್ನು ಸೇದಿ,ಓಡೋಡಿ ಬಂದು ಮಕ್ಕಳ ತಲೆಯ ಮೇಲೆ ಸುರಿದುಬಿಡುತ್ತಿದ್ದರು.ಇದರಿಂದ ಪುಳಕಿತಗೊಂಡ ಮಕ್ಕಳು ಪುನಃ ಪುನಃ ಸೇರುಗಲ್ಲ ಬಳಿ ಓಡಿಬಂದು ಕುಳಿತುಬಿಡುತ್ತಿದ್ದರು.ಅಷ್ಟೇ ಅಲ್ಲದೆ ಬಾವಿಯ ಅಕ್ಕಪಕ್ಕ ಸುಳಿದಾಡಿದ ವಯಸ್ಕರು,ವೃದ್ಧರನ್ನು ಬಿಡದೆ ಕೊಡದಿಂದ ನೀರು ಸೇದಿ ಊರಿನ ಯುವಕರು ಅವರ ಮೈಮೇಲೆ ದಿಢೀರ್ ಎಂದು ಸುರಿದುಬಿಡುತ್ತಿದ್ದರು.ಅದರಲ್ಲಿ ತಪ್ಪಿಸಿಕೊಳ್ಳಲಾಗದೆ ಒದ್ದಾಡಿ ತೊಯ್ದು ಹೋಗುವರೆಷ್ಟೋ,ತಂತಿ ಬೇಲಿ ಮುಳ್ಳು ಕಂಟಿಗಳನ್ನ ಹಾರಿ ಪರಾರಿ ಆದವರೆಷ್ಟೋ ಊಹಿಸಲಾಗುತ್ತಿರಲಿಲ್ಲ.ಆದರೆ ಮೋಜು ಮಸ್ತಿಗೆ ಮಾತ್ರ ಯುಗಾದಿ ಹಬ್ಬ ಅಚ್ಚಳಿಯದೆ ಉಳಿದುಬಿಡುತ್ತಿತ್ತು.
ಹೀಗೆ ಸುಮಾರು 12 ರಿಂದ ಒಂದು ಗಂಟೆಯವರೆಗೆ ಊರಿನ ಜನರನ್ನೆಲ್ಲ ಹುಡುಕಿ ಹುಡುಕಿ ನೀರನ್ನು ಸುರಿಯುವುದು ನಡೆಯುತ್ತಿತ್ತು.ನಂತರ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಮಕ್ಕಳು ಚಿನ್ನಿ ದಾಂಡು,ಗೋಲಿ ಗಜ್ಜುಗ, ಕಣ್ಣಾಮುಚ್ಚಾಲೆ ಜೂಟಾಟಗಳನ್ನು ಆಡುತ್ತಾ ಸಮಯ ಕಳೆದರೆ, ವಯಸ್ಕರು ಮತ್ತು ಮುದುಕರು ಹಣ ಕಟ್ಟಿ ಆಡುವ ಆಟಗಳನ್ನು ಆಡುತ್ತಿದ್ದರು.ಸೋತು ಸುಣ್ಣವಾದ ಕೆಲವರಿಗೆ ಯುಗಾದಿ ಹಬ್ಬ ನಷ್ಟವನ್ನುಂಟು ಮಾಡಿದರೆ,ಗೆದ್ದು ಬೀಗಿದ ಕೆಲವರಿಗೆ ಅದೃಷ್ಟದ ಲಾಭ ತಂದುಕೊಟ್ಟ ಸಂಭ್ರಮದ ಯುಗಾದಿಯಾಗಿ ಪರಿಣಮಿಸುತ್ತಿತ್ತು. ಬಿಸಿಲಿನಲ್ಲಿ ಆಟ ಆಡಿ ಆಡಿ ಸುಸ್ತಾಗಿ ಮನೆಗೆ ಹೋದರೆ ತಂದೆ ತಾಯಿಗಳು ಮಕ್ಕಳ ಮೈ ತೊಳೆಯಲು ಕಾತುರದಿಂದ ಕಾಯುತ್ತಿರುತ್ತಿದ್ದರು. ಎಣ್ಣೆ ಹಚ್ಚಿದ ಮೈ ಸಾಬೂನುಗಳಿಂದ ಬಹುಬೇಗ ಹೋಗುತ್ತಿರಲಿಲ್ಲ. ಆದ್ದರಿಂದ ಹಳ್ಳಿಗಳಲ್ಲಿ ಊರಿನ ಹೊರಗೆ ಮಣ್ಣಿನ ಮೇಲೆ ಒಂದು ರೀತಿಯ ನೊರೆ ಕಾಣುವ ಹಾಗೆ ಮೃದುವಾಗಿ ಬೆಳೆದಿರುತ್ತಿತ್ತು.ಅದನ್ನು ಹಳ್ಳಿಗಳಲ್ಲಿ ಚೌಳು ಎಂದು ಕರೆಯುತ್ತಿದ್ದರು.ಅದು ಯಾವ ಸಾಬೂನುಗಳಿಗೂ ಕಡಿಮೆ ಇರಲಿಲ್ಲ. ಎಂತಹ ಜಿಡ್ಡಾದ ಎಣ್ಣೆ ರಾಡಿ ಕೊಳಕಿದ್ದರೂ ಸಹ ಹಾಕಿ ತಿಕ್ಕಿದರೆ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತಿತ್ತು.ಅಂತಹ ಚೌಳು ಮಣ್ಣನ್ನು ಮಕ್ಕಳ ಮೈಕೈಗಳಿಗೆ ಹಾಕಿ ಉಜ್ಜುತ್ತಿದ್ದರು.ಮಕ್ಕಳ ಮೈಮೇಲೆ ಸಣ್ಣ ಪುಟ್ಟ ಗಾಯಗಳಿದ್ದರೆ ಉರಿ ಶುರುವಾಗಿ ಕಿರ್ರೋ ಮರ್ರೋ ಎಂದು ಕಿರಿಚಿದರೂ ಬಿಡದೆ ಉಜ್ಜಿ ಬಿಡುತ್ತಿದ್ದರು.ಪುನಃ ಸೀಗೆಕಾಯಿ ಪುಡಿಯನ್ನು ತಲೆ,ಮೈ-ಕೈಗೆಲ್ಲ ಹಚ್ಚಿ ಇನ್ನೊಂದು ಸುತ್ತು ಉಜ್ಜಿ ಸ್ನಾನ ಮುಗಿಯುವುದರೊಳಗೆ ಮಕ್ಕಳು ಹಣ್ಣುಗಾಯಿ ನೀರಿಗಾಯಿಯಾಗಿ ಸ್ನಾನ ಮುಗಿದ ಬಳಿಕವೂ ಜಲಜಲ ಬೆವತು ಹೋಗುತ್ತಿದ್ದವು.ಇವತ್ತು ಒದ್ದೆಯಾದ ಮಕ್ಕಳನ್ನು ಕಂಬಳಿ ಹೊಚ್ಚಿ ಮಲಗಿಸಿ ಬಿಡುತ್ತಿದ್ದರು. ಸುಮಾರು ಒಂದರಿಂದ ಎರಡು ಗಂಟೆ ನಿದ್ರೆ ಮಾಡಿದ ಮಕ್ಕಳು ಎದ್ದಾಗ ಯುಗಾದಿ ಹಬ್ಬಕ್ಕೆ ತಂದಿದ್ದ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಂಭ್ರಮಿಸುತ್ತ,ಸಿಹಿ ತಿಂಡಿ ಭಕ್ಷ ಭೋಜಗಳನ್ನು ಸವಿಯುತ್ತಾ ಸಂಜೆಯ ವೇಳೆಗೆ ಚಂದ್ರನನ್ನು ನೋಡಲು ಕಾತುರದಿಂದ ಆಕಾಶಕ್ಕೆ ಮುಖ ಮಾಡಿ ಹುಡುಕುತ್ತಿದ್ದರು. ಚಂದ್ರನನ್ನು ನೋಡಿದ ಬಳಿಕ ಅದೇ ಸಂತಸದಲ್ಲಿ ಅಕ್ಕ ಪಕ್ಕದ ಮನೆಯವರಿಗೆಲ್ಲಾ ಬೇವು ಬೆಲ್ಲವನ್ನ ಹಂಚುತ್ತಾ,ಚಂದ್ರನನ್ನು ನೋಡಿದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರು.ಬೇವು ಬೆಲ್ಲದ ಹಾಗೆ ವರ್ಷಪೂರ್ತಿ ಸುಖ- ದುಃಖವನ್ನು ಸಮನಾಗಿ ಸ್ವೀಕರಿಸಿ ಸಂತೋಷದಿಂದ ಜೀವನ ನಡೆಸಿ ಎಂದು ಹಿರಿಯರು ಆಶೀರ್ವದಿಸುತ್ತಿದ್ದರು.ರಾತ್ರಿಯಾದರೆ ಸಾಕು ಭಕ್ತಿಯಿಂದ ಪೂಜೆ ಪುನಸ್ಕಾರವನ್ನು ಮುಗಿಸಿ ಬಗೆ ಬಗೆಯ ಭಕ್ಷ ಭೋಜಗಳನ್ನು ಕುಟುಂಬ ಸಮೇತರಾಗಿ ಸವಿದು ಆನಂದ ಸಾಗರದಲ್ಲಿ ತೇಲುತ್ತಿದ್ದೆವು. ನಮ್ಮ ಬಾಲ್ಯದ ಇಂತಹ ಸಂಭ್ರಮದ ಯುಗಾದಿಯನ್ನು ಮರೆಯಲಾಗಿದೆ.
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.