You are currently viewing ಹಬ್ಬದ ಸಂಭ್ರಮ ಇಂದು ಮಾರಾಟಕ್ಕಿದೆ

ಹಬ್ಬದ ಸಂಭ್ರಮ ಇಂದು ಮಾರಾಟಕ್ಕಿದೆ

ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು

ಸ್ನೇಹಿತರೇ, ಶ್ರಾವಣ ಮಾಸ ಬಂತೆಂದರೆ ಸಾಕು….ಸಾಲು ಸಾಲು ಹಬ್ಬಗಳು ಒಂದರ ಹಿಂದೆ ಒಂದು ಎಂಬಂತೆ ದಿಬ್ಬಣ ಹೊರಡುತ್ತವೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಇದ್ದೇ ಇರುತ್ತದೆ. ಹಬ್ಬಗಳೆಂದರೆ ಒಂದೇ ಎರಡೇ? ಶುಕ್ರಗೌರಿ, ಮಂಗಳಗೌರಿ, ವರಮಹಾಲಕ್ಷ್ಮಿ, ಪಂಚಮಿ ಹಬ್ಬ, ರಕ್ಷಾಬಂಧನ, ಗೌರಿ-ಗಣೇಶ ಹಬ್ಬ, ದಸರಾ, ದೀಪಾವಳಿ, ಎಳ್ಳ ಅಮವಾಸ್ಯೆ…..ಅಬ್ಬಬ್ಬಾ! ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಹಬ್ಬಗಳು ಹೆಚ್ಚಾನೆಚ್ಚು ಮಹಿಳಾ ಮಣಿಗಳಿಗೆ ಹೆಚ್ಚು ಸಂಭ್ರಮವನ್ನು ತರುವಂತಹ ಹಬ್ಬಗಳು. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೇಳಬೇಕೆಂದರೆ, ನಮಗೆ ವರ್ಷದಲ್ಲಿ ಬರುವ ಹನ್ನೆರಡು ಹುಣ್ಣಿಮೆಗಳು ಮತ್ತು ಹನ್ನೆರಡು ಅಮಾವಾಸ್ಯೆಗಳು ಕೂಡ ಹಬ್ಬವೇ.

ಹಬ್ಬಗಳೆಂದರೆ ಕೇಳಬೇಕೆ? ಸಂಭ್ರಮವೋ ಸಂಭ್ರಮ. ಉಡುಗೆ-ತೊಡುಗೆ, ಮನೆಯ ಅಲಂಕಾರ, ಬಂಧು-ಬಳಗದವರ ಆಗಮನ, ತರತರದ ಭಕ್ಷ್ಯ ಭೋಜನ ಗಳು, ಪೂಜೆ-ಪುನಸ್ಕಾರ, ದೇವಸ್ಥಾನಗಳಿಗೆ ಭೇಟಿ ಕೊಡುವುದು….ಹೀಗೆ ಎಲ್ಲದರಲ್ಲೂ ಸಂಭ್ರಮ. ಇನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಪಂಚಮಿ ಎಂಬುದು ಒಂದು ವಿಶೇಷ ಹಬ್ಬ ಮತ್ತು ಶ್ರಾವಣ ಮಾಸದ ಮೊದಲ ಹಬ್ಬವಾದ್ದರಿಂದ ಇನ್ನೂ ಖುಷಿ. ತರತರದ ಉಂಡೆಗಳನ್ನು ಕಟ್ಟಿ ಡಬ್ಬಿಗಳನ್ನು ತುಂಬಿಸಿಟ್ಟಾಗಲೇ ಮನೆಯಲ್ಲಿರುವ ನಮ್ಮ ಹೆಣ್ಣುಮಕ್ಕಳಿಗೆ ಸಮಾಧಾನ. ಪಂಚಮಿ ಹಬ್ಬ ಬರುವ ಹದಿನೈದು ದಿನಗಳ ಮೊದಲೇ ನಮ್ಮ ತಯಾರಿ ಪ್ರಾರಂಭವಾಗಿರುತ್ತದೆ. ಮನೆಯನ್ನು ಸ್ವಚ್ಛಗೊಳಿಸಿ ಒಪ್ಪ ಓರಣಗೊಳಿಸುವುದು, ಹಾಸಿಗೆ-ಬಟ್ಟೆ-ಬರೆಗಳನ್ನು ತೊಳೆದು ಮಡಿಗೊಳಿಸುವುದು ಪ್ರಥಮದಲ್ಲಿ ಮಾಡುವ ಕೆಲಸಗಳು. ನಂತರದಲ್ಲಿ ನಾಲ್ಕರಿಂದ ಐದು ತರಹದ ಚಟ್ನಿಪುಡಿಗಳ ತಯಾರಿ ಜೋರು. ಶೇಂಗಾ ಚಟ್ನಿ, ಪುಟಾಣಿ ಚಟ್ನಿ, ಅಗಸಿ ಚಟ್ನಿ, ಮೆಂತ್ಯೆ ಚಟ್ನಿ, ಗುರೆಳ್ಳು ಚಟ್ನಿ ಹೀಗೆ…..ಇನ್ನು ಈ ಚಟ್ನಿಗಳಿಗೆ ಸರಿ ಹೊಂದುವಂತಹ ಸಜ್ಜಿ ರೊಟ್ಟಿ, ಜೋಳದ ರೊಟ್ಟಿಗಳನ್ನು ತಟ್ಟಿ ತಟ್ಟಿ ಎತ್ತರವಾಗಿ ಹೊಂದಿಸಿ ಇಡುವುದೇ ದೊಡ್ಡ ಕೆಲಸ. ಇನ್ನು ಕರಿಎಳ್ಳು ಹಚ್ಚಿ ರೊಟ್ಟಿ ಮಾಡಿದರಂತೂ ಅದರ ರುಚಿ ಬಲು ಸೊಗಸು.

ನಾಗರ ಅಮಾವಾಸ್ಯೆಯಾದ ಮೂರನೆಯ ದಿನವೇ ರೊಟ್ಟಿ ಪಂಚಮಿ. ಅಂದು ಮನೆಯಲ್ಲಿ ಹೆಂಗಳೆಯರಿಂದ ತರತರದ ಮೊಳಕೆ ಕಾಳುಪಲ್ಯ, ಜುಣಕ, ಬದನೆಕಾಯಿ ಎಣ್ಣೆಗಾಯಿ, ಸೊಪ್ಪು ಮತ್ತು ಮೂಲಂಗಿಗಳ ಪಚಡಿ, ಚಪಾತಿಗಳ ಮೆನು ಸಿದ್ಧವಿರುತ್ತದೆ. ಹಳ್ಳಿಯಲ್ಲಿ ರೊಟ್ಟಿ ಪಂಚಮಿಯ ವಿಶೇಷವೆಂದರೆ ಅವರ ಮನೆಯಲ್ಲಿ ಮಾಡಿರುವ ಅಡುಗೆ ನಮ್ಮ ಮನೆಗೆ ಬರುತ್ತದೆ, ನಮ್ಮ ಮನೆಯಲ್ಲಿ ಮಾಡಿರುವ ಅಡುಗೆ ಅವರ ಮನೆಗೆ ಹೋಗುತ್ತದೆ. ನಾವೆಲ್ಲ ಚಿಕ್ಕವರಿದ್ದಾಗ ಹೊಸ ಲಂಗ ಮತ್ತು ರವಿಕೆಯನ್ನು ಹಾಕಿಕೊಂಡು, ಚೋಟುದ್ದದ ಜಡೆಯಲ್ಲಿ ಉದ್ದುದ್ದನೆಯ ಹೂವನ್ನು ಇಟ್ಟುಕೊಂಡು, ಕೈ ತುಂಬ ಬಳೆ, ಕಿವಿಯಲ್ಲಿ ಜುಮುಕಿ, ಕಾಲಲ್ಲಿ ಗೆಜ್ಜೆ ಹಾಕಿಕೊಂಡು ಇಡೀ ಊರ ತುಂಬಾ ಅಡ್ಡಾಡಿ ರೊಟ್ಟಿ ಕೊಟ್ಟು ಬರುವುದೇ ಸಂಭ್ರಮವಾಗಿತ್ತು. ಸುಮಾರು ಮಧ್ಯಾಹ್ನ ಎರಡು ಗಂಟೆಯವರೆಗೂ ಅಂದಿನ ಸಂಭ್ರಮ ಹೇಳತೀರದು. ಒಂದು ನಿಮಿಷವು ಕೂಡ ಆಯಾಸಗೊಳ್ಳದೆ ತಿರುಗುತ್ತಿದ್ದೆವು.



ನಾಗರ ಅಮವಾಸ್ಯೆಯಾದ ನಾಲ್ಕನೆಯ ದಿನವೇ ನಾಗಚತುರ್ಥಿ. ಅಂದು ನಾಗದೇವರಿಗೆ ಹಾಲೆರೆಯುವ ಕಾರ್ಯಕ್ರಮ. ದೇವರ ಪಾಲು, ಗುರುವಿನ ಪಾಲು, ಹಿರಿಯರ ಪಾಲು, ಅಪ್ಪನ ಪಾಲು, ಅವ್ವನ ಪಾಲು, ಮನಿ ಮಂದಿಯ ಪಾಲು……ಹೀಗೆ ನಾಗಪ್ಪನಿಗೆ ಹಾಲು ಹಾಕೋದು. ಕೊನೆಗೆ ನಮ್ಮ ಹೆಸರು ಹೇಳಕೊಂಡು ಹಾಲು ಹಾಕೋದು ಯಾವತ್ತೂ ಮರೀತಾ ಇರಲಿಲ್ಲ. ಯಾಕಂದ್ರೆ ಅದು ಒಂಥರಾ ಕ್ರೇಜ್ ಆಗಿ ಇರತಿತ್ತು. ಕೊಬ್ಬರಿ ಬಟ್ಟಲನ್ನು ಒಂದು ದಾರಕ್ಕೆ ಕಟ್ಟಿ ಬುಗುರಿಯಂತೆ ಆಡಿಸುತ್ತಿದ್ದೆವು. ಅದಕ್ಕೆ ಬೋಲು ಬಗರಿ ಅಂತ ಕರೀತಾರೆ.

ಐದನೆಯ ದಿನವೇ ನಾಗಪಂಚಮಿ. ಅಂದು ಮನೆಯಲ್ಲಿಯೇ ಮಣ್ಣಿನಿಂದ ಹಾವು ಮತ್ತು ಹುತ್ತವನ್ನು ಮಾಡಿ ಅದಕ್ಕೆ ಹಾಲೆರೆಯುವ ಸಂಭ್ರಮ. ನೈವೇದ್ಯಗಳಿಗೆ ತರತರದ ಉಂಡಿಗಳು ಸಜ್ಜಾಗಿರುತ್ತಿದ್ದವು. ಶೇಂಗಾ ಉಂಡಿ, ಪುಟಾಣಿ ಹಿಟ್ಟಿನ ಉಂಡಿ ,ಎಳ್ಳ ಉಂಡಿ, ಡಾಣಿ ಉಂಡಿ, ಬೂಂದಿ ಉಂಡಿ, ಗುಳ್ಳಡಕಿ ಉಂಡಿ, ರವಾ ಉಂಡಿ, ಬೇಸನ್ ಉಂಡಿ, ಹೆಸರು ಹಿಟ್ಟಿನ ಉಂಡಿ, ಜೋಳದ ಅಳ್ಳಿನ ಉಂಡಿ, ಕೊಬ್ಬರಿ ಉಂಡಿ, ಚುರುಮುರಿ ಉಂಡಿ…..ಜೊತೆಗೆ ತಂಬಿಟ್ಟು, ಅಳ್ಳಿಟ್ಟು ಮತ್ತು ಕಡಲೆ ಉಸುಳಿ ಕಾಳು ಇವೆಲ್ಲ ಇರಲೇಬೇಕಿತ್ತು.

ಒಂದು ತಿಂಗಳಿನವರೆಗೂ ಪ್ರತಿ ಮನೆಯಲ್ಲೂ ಜೋಕಾಲಿ ಜೀಕಿ ಜೀಕಿ ಮಕ್ಕಳು ಸುಸ್ತಾಗುತ್ತಿದ್ದರು. ವಾರಗಿ ಗೆಳತಿಯರ ಜೊತೆ ಸೇರಿ ಪಂಚಮಿ ಹಬ್ಬದ ಹಾಡು ಹೇಳುತ್ತಾ ಕೇಕೆ ಹಾಕಿ ನಕ್ಕು ನಲಿಯುತ್ತಿದ್ದರು.

ಪಂಚಮಿ ಬಂತವ್ವ ಸನಿಯಾಕ
ನಮ್ಮಣ್ಣ ಬರಲಿಲ್ಲ ಕರಿಯಾಕ
ಕರೇ ಸೀರಿಯ ಉಡಸಾಕ
ನಾಗಪ್ಪಗ ಹಾಲು ಹಾಕಾಕ

ಸಣ್ಣ ಮಕ್ಕಳನ್ನು ಜಮಖಾನ ಹಾಕಿ ಜೋಕಾಲಿಯಲ್ಲಿ ಕೂರಿಸಿ ಬಿಟ್ರೆ ಅವು ಅಲ್ಲೇ ತೂಕಡಿಸಿ ತೂಕಡಿಸಿ ನಿದ್ದೆ ಮಾಡುತ್ತಿದ್ದವು. ದೊಡ್ಡ ದೊಡ್ಡ ಮರಗಳಿಗೆ ಊರ ಯುವಕರು ಹಗ್ಗ ಕಟ್ಟಿ ವಿಧವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಕಣ್ಣಿಗೆ ಬಟ್ಟೆ ಕಟ್ಟಿ ಹೇಳಿದ ಗುರಿ ತಲುಪುವುದು, ಹಿಂದಿನಿಂದ ಟ್ರ್ಯಾಕ್ಟರ್ ಓಡಿಸುವುದು, ಕಲ್ಲುಗಳನ್ನು ಎತ್ತುವುದು, ಕ್ವಿಂಟಲ್ ಚೀಲಗಳನ್ನು ಹೊತ್ತು ಸಾಗುವುದು, ಹಲ್ಲಿನಿಂದ ಗಾಡಿಗಳನ್ನು ಜಗ್ಗುವುದು……ಪಂಚಮಿ ಹಬ್ಬದಲ್ಲಿ ಹುಡುಗಿಯರು ಒಂದು ರೀತಿ ಸಂಭ್ರಮಿಸಿದರೆ, ಹುಡುಗರು ತಮ್ಮ ಸಾಮರ್ಥ್ಯವನ್ನು ತೋರುವ ಆಟಗಳಲ್ಲಿ ಸಂಭ್ರಮಿಸುತ್ತಿದ್ದರು. ಕಟ್ಟ ಕಡೆಯಲ್ಲಿ ಪಂಚಮಿ ಹಬ್ಬವು ಕೆರೆ ಕಟ್ಟಂಬಲಿ ಮತ್ತು ವರ್ಷ ತೊಡಕು ದಿನಗಳಲ್ಲಿ ಪಂಚಮಿ ಹಬ್ಬವು ಕೊನೆಗೊಳ್ಳುತ್ತಿತ್ತು.



ಎಷ್ಟೆಲ್ಲ ತಿಂಡಿ ತಿನಿಸುಗಳು ಇದ್ದರೂ ಕೂಡ ಇಂದಿನ ಹಬ್ಬಗಳಲ್ಲಿ ಮೊದಲಿನ ಸಂಭ್ರಮ ಕಣ್ಮರೆಯಾಗಿದೆ. ಇದಕ್ಕೆಲ್ಲ ಕಾರಣ ಆಧುನೀಕತೆ. ಆಧುನೀಕತೆಯ ಭರಾಟೆಯಲ್ಲಿ ಮನುಷ್ಯನಿಗೆ ಯಾವುದಕ್ಕೂ ಸಮಯವಿಲ್ಲ. ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಕಾಲ ಸಂಭ್ರಮಿಸುತ್ತಿದ್ದ ಹಬ್ಬದ ತಯಾರಿ ಇಂದು ಹತ್ತು ನಿಮಿಷಕ್ಕೆ ಬಂದು ನಿಂತಿದೆ. ಎಲ್ಲಾ ತರಹದ ತಿಂಡಿ ತಿನಿಸುಗಳು ಇಂದು ಮಾರುಕಟ್ಟೆಯಲ್ಲಿ ಸಿದ್ಧವಾಗಿಯೇ ಸಿಗುತ್ತಿವೆ. ಖರೀದಿಸಲು ದುಡ್ಡು ಒಂದು ಇದ್ದರೆ ಸಾಕು. ಇನ್ನು ಮಾರುಕಟ್ಟೆಗೆ ಹೋಗಲು ಸಮಯವಿಲ್ಲವೆಂದರೂ ಕೂಡ ಚಿಂತೆ ಇಲ್ಲ. ಆನ್ಲೈನ್ ಶಾಪಿಂಗ್ ನಲ್ಲಿ ಎಲ್ಲವೂ ಲಭ್ಯ. ಪರಿಸರದಲ್ಲಿ ಆಡುತ್ತಿದ್ದ ಆಟಗಳ ಖುಷಿಯನ್ನು ಇಂದು ಆನ್ಲೈನ್ ಆಟಗಳು ಕಸಿದುಕೊಂಡಿವೆ. ವೀಕೆಂಡ್ ನ ದಿನಗಳಲ್ಲಿ ಮಾಲ್ ಗಳನ್ನು ಹುಡುಕಿಕೊಂಡು ಗೇಮ್ಸ್ ಗಳ ಮೂಲಕ ಮೋಜು ಮಸ್ತಿಯನ್ನು ಕೃತಕವಾಗಿ ಸೃಷ್ಟಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಹಬ್ಬಗಳು ಬಂದರೆ ಸಾಕು, ಇಡೀ ಓಣಿಯ ಹೆಣ್ಣುಮಕ್ಕಳೆಲ್ಲ ಒಂದು ಮನೆಯಲ್ಲಿ ಸೇರಿಕೊಂಡು ಉಂಡಿಗಳನ್ನು ಕಟ್ಟುವ ತಯಾರಿ ಮಾಡುತ್ತಿದ್ದರು. ದವಸ ಧಾನ್ಯಗಳಲ್ಲಿನ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ, ಬೀಸುಕಲ್ಲಿನಲ್ಲಿ ಹಿಟ್ಟು ಮಾಡಿ, ಬುಟ್ಟಿಗೆ ಬಟ್ಟೆ ಕಟ್ಟಿ ಹಿಟ್ಟು ಸೋಸಿ ತೆಗೆದು ಆ ಹಿಟ್ಟಿನಿಂದ ಉಂಡಿಗಳನ್ನು ತಯಾರಿಸುತ್ತಿದ್ದರು. ಒಬ್ಬರ ಮನೆಯಲ್ಲಿ ತಯಾರಾದ ಮೇಲೆ ಮತ್ತೊಬ್ಬರ ಮನೆ…ಹೀಗೆ ಪಾಳೆ ಮುಂದುವರೆಯುತ್ತಿತ್ತು. ಹಬ್ಬದ ತಯಾರಿಯಲ್ಲಿ ಹೆಣ್ಣು ಮಕ್ಕಳ ಹಾಸ್ಯಕ್ಕೂ ಕೊರತೆ ಇರುತ್ತಿರಲಿಲ್ಲ. ಕೆಲಸದ ಮಧ್ಯೆ ಆಕಳಿಕೆಗಳೇನಾದರೂ ಕಾಣಿಸಿಕೊಂಡರೆ ಹಾಡುಗಳ ಮೂಲಕ ನಿದ್ದೆಯನ್ನು ಓಡಿಸುತ್ತಿದ್ದರು.

ಪಂಚಮಿ ಹಬ್ಬದ ಮಾರನೆಯ ದಿನ ಅವರ ಮನೆಯ ಉಂಡಿ ಇವರ ಮನೆಗೆ, ಇವರ ಮನೆಯ ಉಂಡಿ ಅವರ ಮನೆಗೆ ಎಕ್ಸ್ಚೇಂಜ್ ಆಗುತ್ತಿದ್ದವು. ಕೊಟ್ಟು ತೆಗೆದುಕೊಳ್ಳುವುದರ ಜೊತೆಯಲ್ಲಿ ಮಧುರ ಬಾಂಧವ್ಯದ ಕ್ಷಣಗಳು ಕೂಡ ಎಕ್ಸ್ಚೇಂಜ್ ಆಗುತ್ತಿದ್ದವು. ಎಲ್ಲರ ಮನೆಯ ಉಂಡಿ ರುಚಿಯು ಎಲ್ಲರಿಗೂ ತಲುಪುತ್ತಿತ್ತು. ಅಷ್ಟೇ ಅಲ್ಲದೇ ಎಲ್ಲಾ ಬೀಗರ ಮನೆಗಳಿಗೂ ಕೂಡ ಉಂಡಿಗಳು ಚೀಲದಲ್ಲಿ ಪಯಣ ಬೆಳೆಸುತ್ತಿದ್ದವು. ಇಂದು ನಗರ ಪ್ರದೇಶದ ಹೆಣ್ಣು ಮಕ್ಕಳಲ್ಲಾಗಲಿ ಅಥವಾ ಹಳ್ಳಿಯ ಹೆಣ್ಣು ಮಕ್ಕಳಲ್ಲಾಗಲಿ ಹಬ್ಬದ ಸಂಭ್ರಮ ಕಾಣದಾಗಿದೆ. ಜೊತೆಗೆ ಚಿಕ್ಕ ಮಕ್ಕಳಲ್ಲೂ ಕೂಡ ಹಬ್ಬಗಳೆಂದರೆ ಅಸಡ್ಡೆ ಮೂಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಭಾವನಾತ್ಮಕ ಜೀವಿ ಎಂದು ಕರೆಸಿಕೊಂಡ ಮಾನವ ಇಂದು ಭಾವನೆಗಳೇ ಇಲ್ಲದೆ ಬದುಕು ಸಾಗಿಸುತ್ತಿದ್ದಾನೆ. ಪ್ರತಿಯೊಂದನ್ನು ಹಣ ಕೊಟ್ಟು ಖರೀದಿಸುವ ಭರದಲ್ಲಿ ಓಡುತ್ತಿದ್ದಾನೆ. ಅಂದು ಬಂಡಿ ಬಂಡಿಗಟ್ಟಲೆ ದಾನ ಧರ್ಮ ಮಾಡುತ್ತಿದ್ದ ಕಾಲ ಇಂದು ಒಂದು ಉಂಡಿಗೂ ಶಾಣ್ಯಾತನ ಮಾಡು ಹಂಗೆ ಆಗಿದೆ. ಇಂದಿನ ಕಾಲದಲ್ಲಿ ಕೈ ತುಂಬಾ ಕೆಲಸ ಇದೆ, ದುಡ್ಡು ಇದೆ, ಆದರೆ ನೆಮ್ಮದಿಯ ಸಂಭ್ರಮವೇ ಮಾಯವಾಗಿದೆ. ಎಲ್ಲವನ್ನು ಹಣ ಕೊಟ್ಟು ಖರೀದಿ ಮಾಡಬಹುದು ಎಂಬ ಭ್ರಮೆಯಿಂದ ಮನುಷ್ಯ ಹೊರಬರಬೇಕಿದೆ. ಇದು ವಿಚಿತ್ರವೆನಿಸಿದರೂ ಸತ್ಯ!!!

ಭುವನೇಶ್ವರಿ. ರು. ಅಂಗಡಿ
ನರಗುಂದ, ಗದಗ
9945095539


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.