ವರ್ಗ ಸಂಘರ್ಷದ ಬಗ್ಗೆ ನಮ್ಮ ಕಲ್ಪನೆಯ ಎದುರು ತಟ್ಟನೆ ಮೂಡು ವುದು ಬಡವ — ಶ್ರೀಮಂತರ ಮಧ್ಯದ ನಿರಂತರ ಸಂಘರ್ಷ. ಮುಖ್ಯವಾಗಿ ಎರಡು ಮನೆತನದ ಅಥವಾ ಎರಡು ಹಿರಿಯ ತಲೆಮಾರರ ಪರಸ್ಪರ ವೈರುಧ್ಯದ ಜೀವನ ಶೈಲಿಗಳು.
ಆದರೆ ಜಗದ್ವಿಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರಾಯ್ ಅವರ ಕೇವಲ ೧೨ ನಿಮಿಷದ ಕಿರುಚಿತ್ರ ‘ಟೂ’ ಎಂಥ ವಿಭಿನ್ನ ಕಥಾ ಹಂದರ ಹೊಂದಿದೆಯೆ0ದರೆ ಚಿತ್ರ ಮುಕ್ತಾಯಗೊಳ್ಳುವವರೆಗೂ ಎರುಡೂ ಪಾತ್ರಗಳು ಒಂದೇ ಒಂದು ಸಣ್ಣ ಸಂಭಾಷಣೆ ಕೂಡ ಹೇಳುವದಿಲ್ಲ. ಅಂದರೆ ಮಾತಿಲ್ಲದ , ಚಿತ್ರಕಥೆಯೇ ಇಲ್ಲದ,ಯಾವುದೇ ಸನ್ನಿವೇಶವೇ ಪ್ರತ್ಯಕ್ಷವಾಗದ, ಕೇವಲ ಒಂದು ಸಣ್ಣ ಘಟನೆ ಇಟ್ಟುಕೊಂಡು ವರ್ಗ ಸಂಘರ್ಷದ ಅಸಲಿ ಸ್ವರೂಪವನ್ನು ಕಟ್ಟಿಕೊಡುವ ‘ರೆ’ ಅವರ ‘ಟೂ’ ನನಗೆ ಮತ್ತೆ ಮತ್ತೆ ಕಾಡುತ್ತಿರುವ ಕಿರುಚಿತ್ರ.
ಇಬ್ಬರು ಬಾಲಕರು. ಒಬ್ಬ ಅಗರ್ಭ ಶ್ರೀಮಂತ ,ಇವನ ಆಟದ ಸಾಮಾನುಗಳು, ಇವನು ತಿನ್ನುವ ಹಣ್ಣುಗಳು.. ಎಂಥ ವೈಭವೋಪೇತಗಳಾಗಿರುತ್ತವೆ ಎಂದರೆ–ಇವೆಲ್ಲ ಆ ಬಾಲಕನಲ್ಲಿ ಕ್ರಮೇಣ ಒಂಟಿತನ, ಆತಂಕ, ಭಯ, ಈರ್ಷೇ, ಕ್ರೌರ್ಯಗಳ ಬೇರು ಚಿಗುರೊಡೆಯಲು ಶುರುಮಾಡುತ್ತವೆ.
ಇನ್ನೊಬ್ಬ ಬಡ ಬಾಲಕ ; ಶ್ರೀಮಂತ ಬಾಲಕನ ಬಂಗಲೆಯ ಪಕ್ಕದ ಒಂದು ಗುಡಿಸಲಿನಲ್ಲಿ ತನ್ನದೇ ಜಾನಪದೀಯ ಆಟಿಕೆ ಸಾಮಾನುಗಳ ಜೊತೆ ಕಾಲ ಕಳೆಯುವವ.
ಘಟನೆಗೆ ಯಾವಾಗ ವೇಗ ಬರಲು ಶುರುವಾಗುತ್ತದೆಯೆಂದರೆ, ಇಬ್ಬರೂ ಬಾಲಕರು ಪರಸ್ಪರ ತಮ್ಮ ಆಟಿಕೆಸಾಮಾನುಗಳ ಸಾಮರ್ಥ್ಯ ಪ್ರದರ್ಶಿಸಲು ಪೈಪೋಟಿಗೆ ಇಳಿಯುತ್ತಾರೆ.
ಪೈಪೋಟಿ ತೀವ್ರವಾದಾಗ ಬಡ ಬಾಲಕನ ಗಾಳಿಪಟವನ್ನು ಶ್ರೀಮಂತ ಬಾಲಕ ಬಂದೂಕಿನಿಂದ ಗುಂಡು ಹಾರಿಸಿ ಹರಿದು ಹಾಕುತ್ತಾನೆ. ಆಗ ಶ್ರೀಮಂತ ಬಾಲಕ ವಿಕಟನಗೆ ನಗುತ್ತ ಮನೆಯೊಳಗೆ ಹೋದರೆ, ಬಡ ಬಾಲಕ ಹರಿದ ಪಟದ ಜೊತೆ ವಿಷಾದ ನೋಟ ಬೀರುತ್ತ ಗುಡಿಸಲು ಸೇರುತ್ತಾನೆ.
ಆರಂಭದಲ್ಲಿ ಊದಿದ ಬಡ ಬಾಲಕನ ಕೊಳಲಿನ ಮಧುರ ದನಿ ಮತ್ತೆ ಹಿನ್ನಲೆಯಲ್ಲಿ ಮಾರ್ದನಿಸುತ್ತ ಶ್ರೀಮಂತ ಬಾಲಕನಿಗೆ ಬೆಂಬಿಡದ ಭೂತದಂತೆಕಾಡುತ್ತ, ಅವನ ಆಟಿಕೆಸಾಮಾನುಗಳು ಕುಸಿದು ಬೀಳುವ ಘಟನೆಯೊಂದಿಗೆ ಚಿತ್ರ ಕೊನೆಯಾಗುತ್ತದೆ.
ಇದು ಎಷ್ಟು ಅರ್ಥಪೂರ್ಣ ರೂಪಕವಾಗಿ ಮೂಡಿಬಂದಿದೆಯೆಂದರೆ,ಬಾಲಕನ ದುರಹಂಕಾರವಷ್ಟೇ ಭಂಗವಾಗುವದಿಲ್ಲ, ಜೊತೆಗೆ ಜಾಗತೀಕರಣ, ಆಧುನಿಕತೆಯ ದುಷ್ಟತೆ ಕೂಡ ಬಡ ಬಾಲಕನ ಸಹಜಕ್ರಿಯೆಯ ಎದುರು ಉರುಳಿ ಬೀಳುತ್ತದೆ. ಮನುಕುಲದ ಸ್ವಾಸ್ತ್ಯ ವಿಜೃಂಭಿಸುತ್ತದೆ.
ಜಾಗತೀಕರಣದ ರಾಕ್ಷಸಿ ಸ್ವರೂಪವನ್ನು ೧೯೬೪ ರಲ್ಲೇ ಊಹಿಸಿ, ಅದನ್ನು ವರ್ಗಸಂಘರ್ಷದ ಮುಖ್ಯ ಥೀಮನ್ನಾಗಿ ಮಾಡಿ ಅದರ ಅನೇಕ ಆಯಾಮಗಳನ್ನು ‘ರಾಯ್’ ಇಲ್ಲಿ ಹಿಂಜಿ, ಹಿಂಜಿ ನೋಡಿದ್ದಾರೆ. ಆಟಿಕೆಸಾಮಾನುಗಳ ವೈರುಧ್ಯತೆಯಲ್ಲಿ ಒಂದು ‘ವಿಕಾರತೆ’ ಇನ್ನೊಂದು ‘ಸಹಜತೆ’ ಯನ್ನು ಅದರ ಕ್ರಿಯೆ, ಧ್ವನಿ, ಲಯಗಳ ಜೊತೆ ಅದ್ಭುತವಾಗಿ ತೋರಿಸಿದ ‘ರಾಯ್’ ಅವರ ಸೋಪಜ್ಞತೆ ನಿಜವಾಗಿ ಬೆರಗುಗೊಳಿಸುವಂಥದ್ದು.
ದುಡ್ಡಿನ ದರ್ಪದಿಂದಲೇ ಮಕ್ಕಳ ಜಗತ್ತನ್ನು ನಿರ್ಮಿಸುವ ಪಾಲಕರು, ಅದರಿಂದ ಘಾಸಿಗೊಳ್ಳುವ ಪುಟ್ಟ ಮನಸ್ಸು , ಆ ಮನಸ್ಸೇ ಮುಂದೆ ರೌರವತೆ ಪ್ರದರ್ಶಿಸಲು ಮುಂದಾಗುವದು –ಇವೆಲ್ಲ ಶ್ರೀಮಂತ ಬಾಲಕ ಪ್ರದರ್ಶಿಸಿದರೆ, ತನ್ನ ದಾರುಣ ಸ್ಥಿತಿಯಲ್ಲೂ ಜನಪದೀಯ ಆಟಿಕೆಗಳ ಜೊತೆ ಸಹಜ ಜಗತ್ತನ್ನು ನಿರ್ಮಿಸಿಕೊಳ್ಳುವ ಆ ಪುಟ್ಟ ಬಡ ಬಾಲಕನ ಜಗತ್ತೇ ಗಾಂಧೀ ಪ್ರಣೀತ ಗ್ರಾಮ ಭಾರತವನ್ನು ಪ್ರತಿನಿಧಿಸುವುದು ಈ ಕಿರುಚಿತ್ರ ನಮ್ಮ ಹೃದಯ ಮುಟ್ಟುವಂತೆ ತೋರಿಸುತ್ತದೆ. ಅಷ್ಟೇ ಅಲ್ಲದೆ ಈ ಚಿತ್ರವನ್ನು ನಾವು ಮೊಗೆದಷ್ಟು ಅದರ ಅನೇಕ ಸೂಕ್ಷ್ಮತೆಗಳು ನಮ್ಮ ಕಣ್ಣೆದುರು ಬಂದು ನಿಲ್ಲುತ್ತವೆ. ಅಮೆರಿಕಾ ಹಾಗೂ ವಿಯೆಟ್ನಾಂ ಮಧ್ಯದ ಯುದ್ಧದ ಸಂದರ್ಭ, ಬ್ರಿಟಿಷ್ ಮತ್ತು ಭಾರತದ ತಾಕಲಾಟ ಇವೆಲ್ಲ ಈ ಚಿತ್ರದ ಹಿನ್ನೆಲೆಯಾಗಿ ಯೋಚಿಸಿ ಕೆಲ ವಿಮರ್ಶಕರು ಬರೆದರೂ, ನಾನು ಮಾತ್ರ ಈ ಕಿರುಚಿತ್ರವನ್ನು ಸಮಕಾಲೀನ ಜಾಗತೀಕರಣದಲ್ಲಾದ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಗ್ರಹಿಸಿದ್ದೇನೆ.
ಸಂಗೀತ, ಛಾಯಾಗ್ರಹಣವಂತೂ ಅತ್ಯಂತ ಅಚ್ಚುಕಟ್ಟು. ಬಾಲಕರ ಅಭಿನಯವಂತೂ ಅತ್ಯದ್ಭುತ.
ಹೀಗಾಗಿ ಇಲ್ಲಿ’ ಸರ್ವಶ್ರೇಷ್ಠ ನಿರ್ದೇಶಕ’ ಎಂಬ ಪರಿಕಲ್ಪನೆಗೆ ಸತ್ಯಜಿತ್ ರಾಯ್ ಮತ್ತೊಮ್ಮೆ ಸಾಕ್ಷಿಯಾಗುತ್ತಾರೆ. ತಾವೂ ‘ಟೂ’ ಕಿರುಚಿತ್ರವನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ. ಅಂದ ಹಾಗೆ ಇಂದು ಮೇ ೨ ‘ರಾಯ್’ ಅವರ ಜನ್ಮದಿನ!
ಅಂಬಾದಾಸ ವಡೆ
ಬಾಗಲಕೋಟೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
-
- Sale! Add to basket
- ಕಥೆಗಳು (Stories)
Haseena Mattu Itara Kathegalu
- Original price was: ₹750.00.₹725.00Current price is: ₹725.00.
-