You are currently viewing ಸಾಮಾಜಿಕ ನ್ಯಾಯದ ಕೃಷಿಯ ಕಾಯಕ: ಶರಣ ಬಸವೇಶ್ವರರು

ಸಾಮಾಜಿಕ ನ್ಯಾಯದ ಕೃಷಿಯ ಕಾಯಕ: ಶರಣ ಬಸವೇಶ್ವರರು

ವಿಶ್ವ ಮಾನ್ಯ ಸಾಂಸ್ಕೃತಿಕ ನಾಯಕ ಶರಣ ಬಸವಣ್ಣನವರು ಸಾಮಾಜಿಕ ನ್ಯಾಯದ ಹರಿಕಾರರು. ಜಾತಿ ತಾರತಮ್ಯ, ಲಿಂಗ ತಾರತಮ್ಯವನ್ನು ಅಳಿಸಿ ಮಾನವೀಯ ಬದುಕಿನ ಕೃಷಿಗೆ ಕ್ರಾಂತಿ ಹಬ್ಬಿಸಿದವರು ಅಣ್ಣ ಬಸವಣ್ಣನವರು. 12ನೇ ಶತಮಾನದಲ್ಲಿ ಕಂಡಂತಹ ಅಗ್ರಮಾನ್ಯ ವಿಶ್ವ ಸಾಮಾಜಿಕ ಮಾನವತೆಯ ಚಿಂತಕ ಇವರಾಗಿದ್ದಾರೆ ಅಂದರೆ ತಪ್ಪಾಗಲಾರದು. ವಿಶೇಷವೆಂದರೆ ಅನುಭವ ಮಂಟಪ ವಿಶ್ವದ ಪ್ರಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆ ನಮ್ಮದು. ಇಲ್ಲಿ ಪ್ರಜಾತಂತ್ರ ಮಾದರಿಯ ವ್ಯವಸ್ಥೆ ತಿಳಿಸಲಾಗುತ್ತಿತ್ತು. ಕಾಯಕವೇ ಕೈಲಾಸ ಎಂದುಕೊಂಡು ಅವರವರ ವೃತ್ತಿಯನ್ನು ಗೌರವಿಸುತ್ತಾ ಸಾರ್ಥಕ ಬದುಕನ್ನ ಎಲ್ಲಾ ಶರಣರು ಕಂಡು ಕೊಂಡಿದ್ದರು.

‘ಶರಣ ಸತಿ ಲಿಂಗಪತಿ’ ಅನ್ನುವ ಬಸವಣ್ಣನವರ ವಚನದ ಮಾತುಗಳಲ್ಲಿ, ಲಿಂಗ ಪತಿಯಾದರೆ ಎಲ್ಲಾ ಶರಣರು ಸತಿ ಎನ್ನುವ ಗಂಡು ಮತ್ತು ಹೆಣ್ಣು ಇಬ್ಬರೂ ಒಂದೇ ಎನ್ನುವ ಭಾವ ಈ ವಾಕ್ಯದಲ್ಲಿದೆ. ಶರಣ ಸತಿ ಲಿಂಗಪತಿ ವಚನದಂತೆ ಎಲ್ಲಾ ಜಾತಿಯ ಜನರು ಲಿಂಗ ಭೇದವಿಲ್ಲದೆ ಲಿಂಗಧಾರಣೆ ಮಾಡಿಕೊಂಡು ಶರಣ, ಶರಣೇಯಾರಾಗುತ್ತಿದ್ದರು. ಇಲ್ಲಿ ಶರಣರ ಸಮಾಗಮವೇ ಆಗುತ್ತಿತ್ತು. ಸಂಕಷ್ಟಗಳ ಪರಿಹಾರದ ವೇದಿಕೆಯಾಗಿತ್ತು. ಇಲ್ಲಿ ಸಹಪಂಥೀ ಭೋಜನದ ವ್ಯವಸ್ಥೆ ಇದ್ದದ್ದು ಎಂದೆಂದಿಗೂ ಸದಾಕಾಲ ಮಾದರಿ. ಇಲ್ಲಿ ಅಂತರ್ಜಾತಿ ವಿವಾಹವು ಕೂಡ ಜರುಗುತ್ತಿತ್ತು. ಯಾವುದೇ ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನ ಒಳಗೊಳ್ಳುವ ಸಾಮಾಜಿಕ ಕ್ರಾಂತಿ ಇಲ್ಲಿ ನಡೆದಿತ್ತು. ಇಂತಹ ಅನುಭವ ಮಂಟಪದ ಸ್ಥಾಪನೆಯ ಸಂಸ್ಥಾಪಕರು ಎಂಬ ಕೀರ್ತಿಗೆ ಪಾತ್ರರು ನಮ್ಮ ಬಸವಣ್ಣನವರು.



ವಿಶೇಷವಾಗಿ 12ನೆಯ ಶತಮಾನ ಶರಣರ ಶತಮಾನವಾಗಿದೆ. ಮಾನವೀಯ ಬದುಕಿನ ನೆಲೆಯ ಪ್ರಾಧ್ಯಾನತೆಯು ಇಲ್ಲಿ ಗಮನಾರ್ಹವಾದದ್ದು. ಕೃಷಿ ಭೂಮಿ ಅಂದಾಗ ಕಳೆಯೂ ಸಹ ಇರುತ್ತದೆ. ಹಾಗೆ ಪರ ವಿರೋಧಗಳು ಎಲ್ಲಾ ಕಾಲಘಟ್ಟದಲ್ಲಿಯೂ ನಡೆಯುತ್ತದೆ ಅದರಂತೆ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನ ತೆಗೆಯಬೇಕು. ಕಳೆ ತೆಗೆದು ಭೂಮಿಯನ್ನು ಹದಗೊಳಿಸಿ ಫಸಲು ತೆಗೆಯುವ ಕಾಯಕ ದೊಂದಿಗೆ ಕೈಲಾಸವನ್ನು ಕಾಣುವಂತಹ ಬದ್ಧತೆಗೆ ಬಸವಣ್ಣನವರು ಮಾದರಿಯಾಗಿದ್ದಾರೆ. ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗೆ ಸಮಾನವಾಗಿ ಔಷಧಿ ನೀರಿನ ಪೂರೈಕೆ ಮಾಡುವಂತೆ ಸಮಾಜದಲ್ಲಿನ ಕೃಷಿ ಬೆಳೆಗಳು ಗಂಡು-ಹೆಣ್ಣುಗಳು, ಮತ್ತು ಗಂಡಾಗಿ ಹುಟ್ಟಿ ಹೆಣ್ಣಾದವರು, ಹೆಣ್ಣಾಗಿ ಹುಟ್ಟಿ ಗಂಡಾದವರು, ಒಟ್ಟಾರಿಯಾಗಿ ಮನುಷ್ಯರು ಎಂಬ ಸಮಾನವಾಗಿ ಕಾಣುವುದು ಬಸವಣ್ಣನವರ ಬದುಕಿನ ಬದ್ಧತೆಯ ಪ್ರಧಾನವಾಗಿದೆ.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡೆ ಮೀಸೆ ಬಂದರೆ ಗಂಡಂಬರು
ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ
ಕಾಣ ರಾಮನಾಥ.!
(- ಜೇಡರ ದಾಸಿಮಯ್ಯ.)

ಹೀಗೆ ಲಿಂಗತ್ವದ ಬಗೆಗಿನ ಪ್ರಶ್ನೆಗಳು ಕೂಡ ಇವರ ಕಾಲಘಟ್ಟದಲ್ಲಿ ಹೆಚ್ಚಾಗಿರುವುದನ್ನು ನೋಡಿದ್ದೇವೆ. ಶರಣೆ ಗೊಗ್ಗವ್ವೆ ಕೂಡ ಲಿಂಗತ್ವದ ಬಗೆಗಿನ ಪ್ರಶ್ನೆಗಳನ್ನು ಎತ್ತಿದ ಆಕೆ. ಅಕ್ಕಮಹಾದೇವಿ ಸ*** ಸಂಕವ್ವ ಇನ್ನೂ ಮುಂತಾದವರು ಧ್ವನಿಸಿದ ಕಾಲಘಟ್ಟ ಇದು. ಎಲ್ಲರ ಅಭಿವ್ಯಕ್ತಿ ಅವಕಾಶವನ್ನು ಬಸವಣ್ಣನವರು ನೀಡಿದ್ದರು. ಆದ್ದರಿಂದಲೇ ಸಾಮಾಜಿಕ ನ್ಯಾಯದ ಕೃಷಿಯ ಕಾಯಕರಾಗಿ ಶರಣ ಬಸವೇಶ್ವರರು ಕೈಲಾಸವನ್ನು ಕಂಡುಕೊಂಡಿದ್ದಾರೆ.

ಜೊತೆಗೆ ಬಹಳ ಮುಖ್ಯವಾಗಿ ತಿಳಿಯಬೇಕಾದ ಮತ್ತೊಂದು ವಾಸ್ತವ ಅಂಶ ಬಸವ ಜಯಂತಿ ಅಂದಾಗ ನಾಲ್ಕು ಕಾಲಿನ ಎತ್ತಿನ ಮೆರವಣಿಗೆಯಲ್ಲ. ಇದು ಜನರಲ್ಲಿ ಹಾಗೆ ಉಳಿದುಬಿಟ್ಟಿದೆ. ಚಿಕ್ಕವರಿದ್ದಾಗ ನಾವು ಅರ್ಥೈಸಿಕೊಂಡದ್ದು ಸಹ ಹೀಗೆ. ಅದಕ್ಕೆ ಬಸವ ಜಯಂತಿ ಅಂದರೆ ಬಸವಣ್ಣನವರ ತತ್ವ, ಸಾಮಾಜಿಕ ಚಿಂತನೆ, ಅವರ ಬದ್ಧತೆ, ಬದುಕಿನ ನಡೆ-ನುಡಿಗಳನ್ನು ಪ್ರಜ್ಞಾವಂತರು ಪ್ರಸ್ತುತವಾಗಿ ಬಿತ್ತರಿಸುವ ಕೆಲಸ ಹೆಚ್ಚಾಗಬೇಕಿದೆ. ಹಾಗಾಗಿ ಮಹಾತ್ಮರ ಜನ್ಮ ದಿನದ ಆಚರಣೆಯ ಮಹತ್ವ ನಾಡಿನ ಸಮಸ್ತ ಜನತೆ ಅರ್ಥೈಸಿಕೊಳ್ಳಬೇಕು.

ಇಂತಹ ಮಹಾ ಮಾನವತವಾದಿ ಸಾಂಸ್ಕೃತಿಕ ನಾಯಕರು, ಸಾಮಾಜಿಕ ನ್ಯಾಯದ ವಿಶ್ವಗುರುಗಳಾದ ಅಪ್ಪ ಬಸವಣ್ಣನವರ 892ನೇ ಜನ್ಮದಿನದ ಆಚರಣೆಯಲ್ಲಿ ನಾವಿದ್ದೇವೆ. ಹಾಗಾಗಿ ತಮ್ಮೆಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.

ದೀಪಬುದ್ಧೆ ಹೆಚ್. ಜಿ.
ಸಂಶೋಧಕರು
ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ,
ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ