You are currently viewing ಬಂಗಾರದ ಹನಿಗಳು – ಕವನ ಸಂಕಲನ

ಬಂಗಾರದ ಹನಿಗಳು – ಕವನ ಸಂಕಲನ

ಲೇಖಕರು: ಕಂಸ (ಕಂಚುಗಾರನಹಳ್ಳಿ ಸತೀಶ್)

ಪ್ರಕಾಶಕರು: ಕಂಸ ಪ್ರಕಾಶನ ಕಡೂರು

ಪುಟಗಳು 120 / ಬೆಲೆ ರೂ.90

ಪ್ರತಿಗಳಿಗಾಗಿ: ಸತೀಶ್ ಕೆಎಸ್ +91997 932126

ಕವಿಯಾದವನು ಇರುವೆಯ ಕಾಲಿನ ಸಪ್ಪಳವನ್ನು ಕೇಳಿಸಿಕೊಳ್ಳುವಷ್ಟು ಸೂಕ್ಷ್ಮ ಗ್ರಾಹಿ ಆಗಬೇಕೆಂಬ ಮಾತಿದೆ. ಕಂಸ( ಕಂಚುಗಾರನಹಳ್ಳಿ ಸತೀಶ್) ಅವರ “ಬಂಗಾರದ ಹನಿಗಳು” ಕವನ ಸಂಗ್ರಹಕ್ಕೆ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ. ಇದರಲ್ಲಿ ಅಂತಹ ಸೂಕ್ಷ್ಮಗಳು ಸಂಗ್ರಹದ ಉದ್ದಕ್ಕೂ ಓದುಗನಿಗೆ ಅನುಭವವಾಗದೇ ಇರದು.

“ಬಂಗಾರದ ಹನಿಗಳು” ಕಂಸ ಅವರ ಚೊಚ್ಚಲು ಕವನ ಸಂಕಲನ. ಇದರಲ್ಲಿ 100 ಕವನಗಳಿವೆ. ಕಾವ್ಯವಸ್ತು ವೈವಿಧ್ಯಮಯವಾಗಿ ನವಿರಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯ ವಿಷಯಗಳಾದ ಪ್ರಕೃತಿ, ನಮ್ಮ ನೆಲ, ಭಾಷೆ, ಅಮ್ಮ, ಸ್ವಾತಂತ್ರ್ಯ, ಮಗು, ಪ್ರೀತಿ, ನಮ್ಮ ಹಬ್ಬಗಳು ಮುಂತಾದವುಗಳ ಜೊತೆಗೆ
ಗಂಭೀರ ವಸ್ತುಗಳ ಬಗ್ಗೆಯೂ ಕವನಗಳು ಇವೆ.

‘ಮರದಗೋಳು’ ಎನ್ನುವ ಕವನದಲ್ಲಿ ಅವರ ಕವಿತ್ವ ಚೆನ್ನಾಗಿ ಮೂಡಿ ಬಂದಿದೆ. ಅಂತ್ಯ ಪ್ರಾಸವನ್ನು ಚಾಚು ತಪ್ಪದೇ ಅನುಸರಿಸಿದ್ದಾರೆ.
ಒಂದು ಚರಣ ಹೀಗಿದೆ:

ಯಾವ ಜನ್ಮದ ಶತ್ರುವೋ ದೇವರು ಕ್ರೂರಿಯಾದ/
ನನ್ನನ್ನೊಂದು ನಿಂತಲ್ಲೇ ನಿಲ್ಲುವ ಮರವಾಗಿಸಿದ/
ಕಡಿದರೂ ಕೆರೆದುಕೊಳ್ಳಲು ಕೈಗಳಿಲ್ಲದಂತೆ ಮಾಡಿದ/
ಬಡಿದರೂ ತಿರುಗಿ ಬೀಳದಂತೆ ಮೂಕವಾಗಿಸಿದ/

ಇನ್ನೊಂದು ಚರಣ ಹೀಗಿದೆ:
ಸಂತಸದಿಂದ ಕುಣಿದು ಕುಪ್ಪಳಿಸಲು ಬಿಡಲಿಲ್ಲವೇಕೆ/
ನಿಂತು ಸಾಕಾದರೂ ನಡೆಯಲು ಬಿಡಲಿಲ್ಲವೇಕೆ/
ಬೆತ್ತಲೆ ದೇಹಕ್ಕೆ ಬಟ್ಟೆ ತೊಡಲು ಬಿಡಲಿಲ್ಲವೇಕೆ/
ಅಂದಕ್ಕೆ ಆಭರಣಗಳನ್ನು ತೊಡಲು ಅನುವು ಮಾಡಲಿಲ್ಲವೇಕೆ?/

ಜೀವಂತ ಮರದ ವಿಚಿತ್ರ ಸಂಕಟವನ್ನು ಕವಿ ಬಿಂಬಿಸಿದ ರೀತಿ ಇದು. ಎಷ್ಟು ಅರ್ಥಪೂರ್ಣವಾದ ಸಾಲುಗಳು?

“ಕ್ರಾಂತಿಕಾರಿ ಬಸವಣ್ಣ” ಶೀರ್ಷಿಕೆಯ ಕವನದಲ್ಲಿ ಬಸವಣ್ಣನ ಒಟ್ಟು ಸಾಧನೆ ಮತ್ತು ವಚನದ ಆಶಯಗಳನ್ನು ಚೊಕ್ಕವಾಗಿ ಕಟ್ಟಿಕೊಟ್ಟಿದ್ದಾರೆ.

” ನೆನಪಿನ ಬುತ್ತಿಯಲ್ಲಿ” ತಾಯಿಯ ಕೈತುತ್ತನ್ನು ಮನಮು ಟ್ಟುವಂತೆ ಗೇಯತೆಯಿಂದ ರಚಿಸಿದ್ದಾರೆ. ಈ ಕವನವನ್ನು ಮಕ್ಕಳ ಗೀತೆಯಾಗಿಯೂ ಕೈಚಪ್ಪಾಳೆಯೊಂದಿಗೆ ಹಾಡಬಹುದಾದ ಕವಿತೆ.

ಕವನ ಸಂಕಲನದ ತುಂಬಾ ಉಪಯುಕ್ತವಾದ ಆಶಯಗಳನ್ನು ಹೊಂದಿದ ಕವಿತೆಗಳು ಇವೆ. ಓದುಗರಿಗೆ ಮುದ ನೀಡಿ ರಂಜಿಸುತ್ತವೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿ ಸತೀಶ್ ಅವರು ಗದುಗಿನ ವೀರನಾರಾಯಣನ ಸನ್ನಿಧಿಯಲ್ಲಿ ಶಾಲಾ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯಸಕ್ತನಾಗಿ ಸರಸ್ವತಿಯ ಆರಾಧನೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಹಲವು ಸಾಹಿತ್ಯಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಅವರ ಸಾಹಿತ್ಯ ಸೇವೆಗೆ ಪ್ರಶಸ್ತಿಗಳು ಬಂದಿವೆ.

ಕಂಸ ಅವರ ಮುಂದಿನ ಕಾವ್ಯ ನಡಿಗೆ ಪ್ರಭುದ್ಧವಾಗುತ್ತಾ ಸಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು

ಡಾ. ಕೊಳ್ಚಪ್ಪೆ ಗೋವಿಂದ ಭಟ್
ಮಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.