ಜಗದ ಮೇಲಿನ ಪ್ರತಿಯೊಂದು ಜೀವಿಯು ಬದುಕಿ ಬಾಳಲು ತನ್ನದೇ ಆದ ಕೆಲವು ಮೂಲಭೂತ ಅವಶ್ಯಕತೆಗಳನ್ನು ನಿರೀಕ್ಷಿಸುತ್ತದೆ. ಅವುಗಳು ಸಮರ್ಪಕ ರೀತಿಯಲ್ಲಿ ಸಿಕ್ಕಾಗ ಮಾತ್ರ ಜೀವಿಗೆ ತೃಪ್ತಿ. ಅದೇ ಮಾದರಿಯಲ್ಲಿ ಮಾನವ ಜೀವಿ ಎಂಬ ಸಂಕುಲದಲ್ಲಿ ಮಹಿಳೆಯ ಕಡೆಗೆ ಒಂದು ವಿಶೇಷ ದೃಷ್ಟಿಯನ್ನು ಹರಿಸಿದಾಗ, ಅವಳ ಬೇಡಿಕೆಗಳು ತುಸು ಹೆಚ್ಚೇ.
ನಿನ್ನೆ ಮೊನ್ನೆಯಷ್ಟೇ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿಕೊಂಡ ಮಹಿಳೆಯರಿಗೆ ಅಂದು ದಿನ ಪೂರ್ತಿ ಶುಭಾಶಯಗಳು ಪ್ರವಾಹ. ಆದರೆ ಕೇವಲ ಶುಭಾಶಯಗಳನ್ನು ತಿಳಿಸಿದಾಕ್ಷಣ ಅವಳು ಅನುಭವಿಸುವ ಬವಣೆಗಳ ಬಗ್ಗೆ ಚಿಂತಿಸುವವರಾರು? ಪರಿಹಾರ ಕೊಡುವವರಾರು? ಈ ನಿಟ್ಟಿನಲ್ಲಿ ಚಿಂತಿಸುವುದಾದರೆ ಮಹಿಳೆ ತನ್ನೊಳಗೆ ಅದೆಷ್ಟೋ ನೋವುಗಳನ್ನು ಅನುಭವಿಸಿದರು ಕೂಡ, ಹೊರಗಿನ ಜಗತ್ತಿಗೆ ಮಾತ್ರ ಅವಳು ಸಂತಸದ ಚಿಲುಮೆ.ಮಹಿಳೆಯನ್ನು ಪೂಜಿಸುವುದಕ್ಕಿಂತಲೂ,ಅವಳ ಅಂತರಾಳದಲ್ಲಿ ಗೌಣವಾಗಿರುವ ನೋವುಗಳಿಗೆ ಸ್ಪಂದಿಸಿದಾಗ ಮಾತ್ರ ಈ ಒಂದು ಮಹಿಳಾ ದಿನಾಚರಣೆಗೆ ಇನ್ನೂ ಹೆಚ್ಚು ಗೌರವ ಸಿಕ್ಕಂತಾಗುವುದು.
2022 ರ ಅಕ್ಟೋಬರ್ ತಿಂಗಳಿನಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಸರಕಾರಿ ಶಾಲೆಯ ಶಿಕ್ಷಕರಾದ ಶ್ರೀ ಕಂಚುಗಾರನಹಳ್ಳಿ ಸತೀಶ್ ಅವರು ” ಸ್ಯಾನಿಟರಿ ಪ್ಯಾಡ್(Only for Ladies…..)”ಎನ್ನುವ ಕಾದಂಬರಿಯನ್ನು ಬಿಡುಗಡೆ ಮಾಡಿದ್ದರು.ಕಾದಂಬರಿಯ ಶೀರ್ಷಿಕೆಯೇ ಕೆಲವರಿಗೆ ವಿಚಿತ್ರವೆಂದೆನಿಸಿ,ಮುಜುಗರ ಕ್ಕೊಳಪಡುವಂತೆ ಮಾಡಿತ್ತು.ಆಧುನಿಕತೆಯ ಬಗ್ಗೆ ಮಾತನಾಡುವ ಮಹಿಳೆಯರೂ ಕೂಡ ಕಾದಂಬರಿಯ ವಿಷಯ ವಸ್ತು ನೋಡಿ ದಂಗಾಗಿದ್ದರು.ಈ ಕಾದಂಬರಿಯ ಕಥಾವಸ್ತು ಒಂದು ಪ್ರೇಮಕಥೆಯಾಗಿದ್ದು,ಹಲವಾರು ತಿರುವುಗಳನ್ನು ಪಡೆದುಕೊಂಡು ಕೊನೆಗೆ ಸುಖಾಂತ್ಯವನ್ನು ಕಾಣುತ್ತದೆ. ಇಲ್ಲಿ ಕಾದಂಬರಿಯ ಮೂಲಕ ಸ್ತ್ರೀಪರ ಕಾಳಜಿಯನ್ನು ಎತ್ತಿ ತೋರಿಸಿದ ಕಂಸ ಸರ್ ಅವರ ಮನೋಭಿಲಾಷೆಯನ್ನು ನಾವು ಮೆಚ್ಚಲೇಬೇಕು.
ವಿಜ್ಞಾನಿಯಾಗಿ ವೈಜ್ಞಾನಿಕ ಮನೋಭಾವ ಇಲ್ಲದಿದ್ದರೇನು ಫಲ?ಎಂಬಂತೆ,ಜೀವನದ ಹಲವಾರು ಪಾತ್ರಗಳನ್ನು ಸಮರ್ಪಕವಾಗಿ ನಿಭಾಯಿಸುವ ಸ್ತ್ರೀಗೆ ಆಧುನಿಕತೆಯ ವಿಚಾರಗಳಿಗೆ ತನ್ನನ್ನು ತಾನು ತೆರೆದುಕೊಳ್ಳದಿದ್ದರೇನು ಫಲ?
ಈ ಕಾದಂಬರಿಯ ಮೂಲಕ ಶಿಕ್ಷಕ ಸತೀಶ್ ರವರು ಸ್ಯಾನಿಟರಿ ಪ್ಯಾಡ್ ಅಭಿಯಾನವನ್ನು ಕೂಡ ಕೈಗೊಂಡಿದ್ದರು. ಈ ಅಭಿಯಾನವು ನಮ್ಮ ಸಮಾಜದ ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆಯ ಮಹಿಳೆಯರಿಗೆ,ನಿರ್ಗತಿಕರಿಗೆ ಹಾಗೂ ಇತರರಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಸ್ಯಾನಿಟರಿ ಪ್ಯಾಡ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಎಲ್ಲೆಡೆ ಸಿಗುವಂತಾಗಲಿ ಎಂಬ ದೃಢ ಸಂದೇಶವನ್ನು ಹೊಂದಿದೆ.ವಿನೂತನ ಅಭಿಯಾನದ ಮೂಲಕ ಅವರು ಸರಕಾರದ ಗಮನವನ್ನು ಸೆಳೆಯಲು ಹಾತೊರೆಯುತ್ತಿದ್ದಾರೆ.ಕಾದಂಬರಿಯನ್ನು ಓದಿದ ಅನೇಕ ಮಹನೀಯರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಒಬ್ಬ ಮಹಿಳೆಯು ಹಲವಾರು ಪಾತ್ರಗಳನ್ನು ನಿರ್ವಹಿಸುವಂತೆ,ಒಬ್ಬ ಪುರುಷನೂ ಕೂಡ ಹಲವು ಸಂಬಂಧಗಳ ಪಾತ್ರಧಾರಿ.ತಮ್ಮ,ಅಣ್ಣ,ತಂದೆ,ಮಗ,ಅಪ್ಪ, ಗಂಡ….ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಆ ಎಲ್ಲಾ ಪಾತ್ರಗಳನ್ನು ಲೇಖಕರು ಹಂತ ಹಂತವಾಗಿ ನಿಭಾಯಿಸುತ್ತಿದ್ದಾರೆ.ಸ್ಯಾನಿಟರಿ ಪ್ಯಾಡ್ ಕಾದಂಬರಿಗೆ ಪ್ರತಿಷ್ಠಿತ ರುಶಿ ಪ್ರಕಾಶನದ ರಾಜ್ಯಮಟ್ಟದ ಪ್ರಥಮ ವರ್ಷದ ಅಪ್ಪ ಪ್ರಶಸ್ತಿ ಲಭಿಸಿದೆ.ಸ್ತ್ರೀಪರ ಕಾಳಜಿಯನ್ನು ನೋಡಿ ಗುರುತಿಸಿ, ಪ್ರಶಸ್ತಿ ನೀಡಿದ ಪ್ರಕಾಶನದ ಸಮಸ್ತ ಬಳಗಕ್ಕೂ ಹಾಗೂ ಕಾದಂಬರಿಯನ್ನು ಓದಿ ಉತ್ತೇಜಿಸಿದ ಸಾಹಿತ್ಯಾಸಕ್ತರಿಗೂ ಹೃನ್ಮನದ ಕೃತಜ್ಞತೆಗಳು. ಸತೀಶ್ ಅವರ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ,ಮತ್ತಷ್ಟು ಒಳ್ಳೆಯ ಕೃತಿಗಳು ಅವರ ಲೇಖನಿಯಲ್ಲಿ ಮೂಡಿ ಬರಲಿ ಎಂದು ಈ ಮೂಲಕ ಸಮಸ್ತ ಸ್ತ್ರೀ ಬಳಗದ ಪರವಾಗಿ ಅಭಿನಂದಿಸುತ್ತೇನೆ.
ಭುವನೇಶ್ವರಿ.ರು.ಅಂಗಡಿ
ಶಿಕ್ಷಕಿಯರು, ಸ.ಹಿ.ಪ್ರಾ.ಶಾಲೆ ಸಂಕಧಾಳ
ತಾ-ನರಗುಂದ ಜಿ-ಗದಗ
9945095539
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.