ನೂರು ಜಾತಿಯ ಹಕ್ಕಿಗಳು
ಒಂದೇ ಬಣದಲ್ಲಿ ಬದುಕುತ್ತವೆ
ಯಾವ ಭೇದ ಭಾವವಿಲ್ಲದೆ
ಹಾಡಿ ಕುಣಿದು ನಲಿಯುತ್ತವೆ
ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ
ಮೇಲು-ಕೀಳು ಉಚ್ಚ-ನೀಚ ಎಂಬ ಗೋಡೆಯ ಕಟ್ಟಿಕೊಂಡು
ಸಾಮಾಜಿಕ ಕಟ್ಟುಪಾಡುಗಳಲ್ಲಿ
ಸಿಲುಕಿ ಕಿತ್ತಾಡಿ, ಕಿರುಚಾಡಿ
ಜಾತಿಗ್ರಸ್ಥರಾಗಿ ಬಂಧಿಯಾಗಿದ್ದಾರೆ.
ನೂರು ಬಗೆಯ ಹೂವುಗಳು
ಒಂದೇ ತೋಟದಲ್ಲಿ ಅರಳುತ್ತವೆ.
ಜಗದ ತುಂಬೆಲ್ಲ ತಮ್ಮ ಪರಿಮಳ ಹರಡುತ್ತವೆ
ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ
ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ
ಧರ್ಮಗಳ ಪರದೆಯಲ್ಲಿ ಸಿಲುಕಿಕೊಂಡು
ಭಾವೈಕ್ಯತೆಯ ಈ ನೆಲದಲ್ಲಿ
ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ
ನಾ ಮೇಲು ನೀ ಮೇಲು ಅಂತ ಬೀಜ ಬಿತ್ತುತ್ತಿದ್ದಾರೆ.
ನೂರು ಪ್ರಭೇದಗಳ ಪ್ರಾಣಿಗಳು
ಒಂದೇ ಕಾಡಿನಲ್ಲಿ ಜೀವಿಸುತ್ತವೆ
ಒಂದಕ್ಕೊಂದು ಅವಲಂಬಿಸಿ
ಸಹಬಾಳ್ವೆಯಿಂದ ಸಾಗುತ್ತವೆ
ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ
ಮತೀಯ ದ್ವೇಷದ ಭಾವನೆಯಲ್ಲಿ
ಅಮಾನುಷತೆಯಿಂದ ವರ್ತಿಸಿ
ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ
ಕೂಡಿ ಬಾಳದೆ ಒಬ್ಬರ ಮೇಲೆ ಒಬ್ಬರು ಕೆಂಡಕಾರುತ್ತಿದ್ದಾರೆ.
ಜೀವ ನೀಡುವ ನದಿಗಳೆಲ್ಲವೂ
ಯಾವ ನಿರ್ಬಂಧವಿಲ್ಲದೆ
ಸ್ವಾತಂತ್ರ್ಯವಾಗಿ ತಮ್ಮ ಇಚ್ಛೆಯಂತೆ
ನೆಲದ ತುಂಬೆಲ್ಲಾ ಹರಿಯುತ್ತವೆ
ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ
ಕೆಳಜಾತಿಯ ವ್ಯಕ್ತಿಯೊಬ್ಬನ ಕಾಲುಗಳು
ಮೇಲ್ಜಾತಿಯವರ
ಮನೆಯ ಒಸಲನ್ನು ಸಹ ದಾಟುವಂತಿಲ್ಲ
ಪ್ರೀತಿಸಿದ ಹುಡುಗಿಯನ್ನು ಸಹ ವರಿಸುವಂತಿಲ್ಲ.
– ಹುಸೇನಸಾಬ ವಣಗೇರಿ
ಸಂಶೋಧನಾ ವಿದ್ಯಾರ್ಥಿ,
ಕ. ವಿ. ವಿ ಧಾರವಾಡ
7829606194.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
Super sir
ಧನ್ಯವಾದಗಳು 🙏🏻