ಬರುತಿದೆ ಯುಗಾದಿ ಸಂತಸ ಮರಳಿದೆ
ಹರುಷದಿ ಚಿಗುರದು ಚೆಲುವನು ತೋರಿದೆ
ತರುಲತೆ ಪುಳಕದಿ ಚಾಮರ ಬೀಸಿದೆ
ಸರಿದಿದೆ ತಮವದು ಬೆಳಕದು ಮೂಡಿದೆ
ವಸಂತ ಬಂದನು ಗೆಲುವನು ತಂದನು
ಪಿಸುನುಡಿ ಮಾತಲಿ ನಲಿಸಿದ ಹೂವನು
ಹೊಸತನ ತುಂಬುತ ಕಟ್ಟಿಸಿ ತಳಿರನು
ನಸುನಗೆ ಬೀರುತ ಹರಸಿದ ಜಗವನು
ಹಬ್ಬದ ಕಳೆಯದು ಧರಣಿಗೆ ಬಂದಿತು
ಮಬ್ಬಿನ ಮುಸುಕನು ಸರಿಸುತ ಕುಣಿಸಿತು
ಹಬ್ಬಿತು ಸಂತಸ ಹುಗ್ಗಿಯ ಬಡಿಸಿತು
ತಬ್ಬಿತು ಸೌಖ್ಯವು ನೋವನು ಮರೆಸಿತು
ಬೇವಿನ ಕಹಿಯನು ಬೆಲ್ಲದ ಸಿಹಿಯನು
ಸೇವಿಸಿ ಸವಿಯುವ ಸಮತೆಯ ಸೊಗಸನು
ಜೀವನ ರಸವನು ಮೆಲ್ಲುತ ನಡೆಯುವ
ಭಾವದಿ ಶುಭವನು ಜನತೆಗೆ ಬಯಸುವ
ಅಪರ್ಣಾ ದೇವಿ
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.