ಕನ್ನಡವೆಂದರೆ ಮೂಜಗವೆಲ್ಲಡೆ ಹರ್ಷವ ತುಂಬುವ ಭಾಷೆಯಿದೂ
ರನ್ನನ ಕಾವ್ಯದ ಕಾಂತಿಯು ಹಬ್ಬಿಸಿ ಸಂಚಯಗೊಂಡಿಹ ತಾಯ್ನುಡಿಯೂ
ಜನ್ನನ ಪದ್ಯವು ಬಿತ್ತರಗೊಳ್ಳುತ ಪಾವನವಾಗಿದೆ ತಾಯ್ನೆಲವೂ
ಪೊನ್ನನು ಹಚ್ಚಿದ ಕಾವ್ಯದ ದೀಪವು ಮಾನ್ಯತೆಗೈದಿದೆ ಸರ್ವರಲೀ
ಅಂದವ ತುಂಬಿದ ಸುಂದರ ಭಾಷೆಯ ತೋರಣ ಕಟ್ಟಿದ ನಾಡಿದುವೇ
ಬಂಧುರಗೊಂಡಿಹ ಸಗ್ಗದ ನಾಡನು ಕಾಯುವ ಭಕ್ತಿಯು ತೋರುತಲೀ
ವಂದಿಸಿ ತಾಯಿಯ ಕೀರ್ತಿಯ ಹೆಚ್ಚಿಸಿ ಕನ್ನಡ ಗಾನವ ಸಾರುತಲೀ
ಗಂಧದ ಸೌರಭ ಸೂಸುವ ನಾಡಿಗೆ ಭಕ್ತಿಯ ಗೀತೆಯನೋದುತಲೀ
ನಮ್ಮಯ ನಾಡಿದು ಚಿನ್ನದ ಬೀಡಿದು ಶೃಂಗದ ಭೃಂಗದ ಕೋಮಲೆಯೂ
ಗಮ್ಮನೆ ಬೀರುವ ಮಲ್ಲಿಗೆ ಹೂವಿನ ಕಂಪಲಿ ಮೀಯುವ ನಾಕವಿದೂ
ಹೊಮ್ಮುವ ನಾದದ ಮಂಗಳ ವಾದ್ಯದಿ ತೊಂತನ ಮೂಡಿಪ ತಾಯ್ನೆಲವೂ
ಬಿಮ್ಮನೆ ವೃಂದಕೆ ದಿಬ್ಬಣ
ಸೇರಿಸಿ ಪೆಂಪನ ಭಿನ್ನಣ ತೌರಿದುವೇ
ತೇಗದ ಬೀಟೆಯ ಸಸ್ಯದ ಕಾಶಿಯ ಸಂಪದ ಕೀರ್ತಿಯ ನಾಡಿದುವೇ
ನಾಗರ ಕಲ್ಲಿನ ಮಂಟಪ ಕೆತ್ತಿಹ ದೈವಿಕ ಶಕ್ತಿಯ ಸೂರಿದುವೇ
ಯೋಗಿಯ ಭೋಗಿಯ ಸಂತರ ನಂಟಿನ ಸತ್ಯದ ಶೋಧಕ ನಾಡಿದುವೇ
ತ್ಯಾಗದ ಮಣ್ಣಿನ ನೆತ್ತರ ಕೋಡಿಯು ತುಂಬಿದ ಶೌರ್ಯದ ನಾಡಿದುವೇ
ಅಕ್ಕರೆ ತೋರಿದ ಸಖ್ಯದ ಮಾತಿನ ಬಲ್ಮೆಯ ಹೆಚ್ಚಿದ ಕನ್ನಡವೂ
ನಕ್ಕರೆ ಸಾಕಿದು ಹಾಲಿನ ಮೇಖಲೆ ಲಾಸ್ಯದ ನೃತ್ಯವನಾಡುತಲೀ
ಸಕ್ಕರೆ ನಾಡಿದು ಭವ್ಯದ ಮಂದಿರ ದಿವ್ಯತೆ ತೋರಿದ ಪುಣ್ಯನೆಲಾ
ಮಕ್ಕಳ ಪೋಷಿಸಿ ದೈನ್ಯತೆ ತುಂಬಿದ ತೂಗುವ ತೊಟ್ಟಿಲ ಶಾಂತಿನೆಲಾ
ಪೂನಂ ಧಾರವಾಡಕರ
ಶಿವ ಸಾನ್ನಿಧ್ಯ ನಿಲಯ
ದೇಸಾಯಿ ಲೇ ಔಟ್ ಗುತ್ತಿಗೇರಿಗಲ್ಲಿ ಹಳಿಯಾಳ -581329
7204487202